“ದೀಪಗಳ ಹಬ್ಬ ದೀಪಾವಳಿಯು ಸುಜ್ಞಾನದ ಪ್ರತೀಕ”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:- ದೀಪಗಳ ಹಬ್ಬ ದೀಪಾವಳಿಯು ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರು ಮತ್ತು ನಿವೃತ್ತ ಶಿಕ್ಷಕರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿಮಲ್ಲೇಶ್ವರ ನಿವಾಸದಲ್ಲಿ “ದೀಪಾವಳಿ ಹಬ್ಬ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ದೀಪಾವಳಿ ಹಬ್ಬ”ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ದೀಪಾವಳಿ ಹಬ್ಬವನ್ನು ಮೂರು ದಿನಗಳ ಕಾಲ ನರಕ ಚತುರ್ದಶಿ, ದೀಪಾವಳಿ ಅಮಾವಾಸ್ಯೆ ಹಾಗೂ ಬಲಿಪಾಡ್ಯಮಿಯಾಗಿ ಆಚರಿಸುತ್ತೇವೆ. ನರಕ ಚತುರ್ದಶಿಯು ಭಗವಾನ್ ಶ್ರೀಕೃಷ್ಣನು ಹದಿನಾರು ಸಾವಿರ ಗೋಪಿಕಾ ಸ್ತ್ರೀಯನ್ನು ನರಕಾಸುರನೆಂಬ ರಾಕ್ಷಸನಿಂದ ಬಿಡುಗಡೆಗೊಳಿಸಿದ ದಿನವಾಗಿದ್ದು, ಅಮಾವಾಸ್ಯೆಯಂದು ಮನೆಗಳಲ್ಲಿ ಲಕ್ಷ್ಮೀ ಪೂಜೆ,ಅಂಗಡಿ ಪೂಜೆ ಇತ್ಯಾದಿ ಪೂಜೆಗಳನ್ನು ಮಾಡಲಾಗುತ್ತದೆ. ಬಲಿಪಾಡ್ಯಮಿಯಂದು ಮಹಾವಿಷ್ಣು ವಾಮನ ರೂಪಿಯಾಗಿ ಬಲಿ ಚಕ್ರವರ್ತಿಯ ಅಹಂಕಾರವನ್ನು ನಾಶಪಡಿಸುತ್ತಾನೆ ಎಂದರು. ಈ ಸತ್ಸಂಗದ ಅಂಗವಾಗಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನೆ ಮತ್ತು ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ’ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ವಿಶೇಷ ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್, ಸರ್ವಮಂಗಳ ಶಿವಣ್ಣ, ರಾಧಮ್ಮ ಭೀಮಾರೆಡ್ಡಿ, ಸರಸ್ವತಿ ರಾಜು ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

