ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಮಹಿಳೆಯರಿಂದ ಪ್ರತಿಭಟನೆ
ಮೊಳಕಾಲ್ಮುರು:- ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸುವಂತೆ ವಿವಿಧ ಗ್ರಾಮಗಳ ಮಹಿಳೆಯರು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಮಧ್ಯಾಹ್ನ 12:30 ಕ್ಕೆ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರಗತಿಪರ ಸಂಘಟನೆಯ ಮುಖಂಡೆ ಕೆಜೆ ಜಯಲಕ್ಷ್ಮಿ ಮಾತನಾಡಿ, ತಾಲೂಕಿನಲ್ಲಿ ಬಡಜನರು ಮತ್ತು ಕೂಲಿ ಕಾರ್ಮಿಕರು ಹೆಚ್ಚಿದ್ದು ಪ್ರತಿ ನಿತ್ಯವು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಾರೆ.ಆದ್ರೆ ತಜ್ಞ ವೈದ್ಯರಿಲ್ಲದ ಕಾರಣ ದೂರದ ಊರುಗಳಿಗೆ ರೋಗಿಗಳನ್ನು ಕಳುಹಿಸುತ್ತಾರೆ.ಇದರಿಂದಾಗಿ ಬೇರೆಡೆ ತೆರಳಲು ಸಾರಿಗೆ ಸಮಸ್ಯೆ ತಲೆದೂರುವುದಲ್ಲದೆ ಮಹಿಳೆಯರು, ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಆಶಕ್ತ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ವೈದ್ಯರಿಲ್ಲದ ಕಾರಣ ದಿನ ಪೂರ್ತಿ ದುಡಿದು ಅನ್ಯ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಬಂದಿದೆ.
ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ ಪ್ರಸೂತಿ ತಜ್ಞರು ಸೇರಿದಂತೆ ತಜ್ಞ ವೈದ್ಯರನ್ನು ಸರ್ಕಾರ ನೇಮಿಸಬೇಕು ಇಲ್ಲಿ ಬುಡಕಟ್ಟು ಮತ್ತು ಪರಿಶಿಷ್ಟ ಜಾತಿ ಸಮುದಾಯದವರೇ ಹೆಚ್ಚಿರುವ ಕಾರಣ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಭರಿಸುವ ಶಕ್ತಿ ಇವಗಿಲ್ಲ ಹಾಗಾಗಿ ಸರ್ಕಾರವು ಕೂಡಲೇ ವೈದ್ಯರನ್ನು ನೇಮಿಸಬೇಕು, ಈ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ ಮಹಿಳೆಯರ ನೋವು ಅರಿತು ಮಾತನಾಡುತ್ತಿರುವೆ ಎಂದರು. ಇನ್ನು ಇದೇ ಸಂದರ್ಭದಲ್ಲಿ ನಾನಾ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ವೈದ್ಯರನ್ನು ನೇಮಿಸುವಂತೆ ತಮ್ಮ ಅಳಲು ತೋಡಿಕೊಂಡರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪ್ರಭಾರಿ ವೈದ್ಯಾಧಿಕಾರಿ ಡಾ. ಗಿರೀಶ್ ಅವರಿಗೆ ಮನವಿ ಪತ್ರ ನೀಡಲಾಯಿತು.

