ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಿಸಲು ಜಾಗ ನೀಡುವ ವಿಚಾರ ಶಾಸಕರ ವಿವೇಚನೆಗೆ ಬಿಟ್ಟಿದ್ದು : ಮಂಜುಳಶ್ರೀಕಾಂತ್
ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಜಾಗ ನೀಡುವ ವಿಚಾರಕ್ಕೆ ಪ್ರಸ್ತಾಪಿಸಿ ಜಾಗ ನೀಡಲು ಸಂಪೂರ್ಣ ಒಪ್ಪಿಗೆ ಇದೆ ಆದರೆ ಶಾಸಕರ ಗಮನಕ್ಕೆ ತರುವುದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಎನ್.ಮಹಂತಣ್ಣ ಮಾತನಾಡಿ ಹೋಬಳಿಯಲ್ಲಿ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂಬುವ ಉದ್ದೇಶದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಪ.ಪಂ. ಸದಸ್ಯ ಸೈಯದ್ ಅನ್ವರ್ ಮಾತನಾಡಿ ನಮ್ಮ ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಪ್ರಸ್ತುತ ನಿಗಧಿಪಡಿಸಿರುವ ಜಾಗವನ್ನು ಬಿಟ್ಟು, ಬೇರೆ ಸ್ಥಳದಲ್ಲಿ ನಿರ್ಮಿಸಿದರೆ ಅಭ್ಯಂತರವಿಲ್ಲ. ಸದರಿ ಜಾಗದಲ್ಲಿ ಪ.ಪಂ.ಗೆ ಯಾವುದೇ ರೀತಿಯ ಆದಾಯ ವಿರುವುದಿಲ್ಲ. ಆದಾಯ ಬರುವ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಹೇಳಿದರು. ಪಟ್ಟಣದ ರಸ್ತೆಯಲ್ಲಿ ಹಾಕಲಾಗಿರುವ ಸ್ಪೀಡ್ ಬ್ರೇಕರ್ಗಳಲ್ಲಿ ಅಪಘಾತಗಳು ಹೆಚ್ಚಿನದಾಗಿ ಆಗುತ್ತಿವೆ, ಆ ಸ್ಥಳಗಳಲ್ಲಿ ಜೀಬ್ರಾ ಕ್ರಾಸಿಂಗ್ ಮಾಡಿಸಿದರೆ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಪ.ಪಂ. ಸದಸ್ಯ ಎಂ.ಟಿ. ಮಂಜುನಾಥ ಮಾತನಾಡಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅವಶ್ಯಕತೆ ಇದೆ ಆದರೆ ಪ್ರಸ್ತುತ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯಾದ ಶಕ್ತಿ ಯೋಜನೆಯಿಂದ ನಾಯಕನಹಟ್ಟಿ ಹೋಬಳಿ ವಂಚಿತವಾಗಿದೆ. ಏಕೆಂದರೆ ಹೋಬಳಿಯಲ್ಲಿ ೪ ರಿಂದ ೫ ಸಾರಿಗೆ ಸಂಸ್ಥೆಯ ಬಸ್ಗಳು ಸಂಚರಿಸುತ್ತಿದ್ದು ಇದರಿಂದ ಹೋಬಳಿಯ ಜನತೆ ಯಾವುದೇ ರೀತಿಯ ಪ್ರಯೋಜನ ಪಡೆದಿಲ್ಲ. ಹಾಗಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅವಶ್ಯಕತೆ ಇರುವುದಿಲ್ಲ. ನಾಯಕನಹಟ್ಟಿ ಹೋಬಳಿಯ ಜನತೆ ಖಾಸಗಿ ಬಸ್ಗಳಿಗೆ ಅವಲಂಭಿತರಾಗಿದ್ದಾರೆ. ಹಾಗೇನಾದರೂ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನಿಲ್ದಾಣ ಸ್ಥಾಪಿಸಬೇಕಾದರೆ ಜಾಗವನ್ನು ಖರೀದಿಸಿ ನಿಲ್ದಾಣ ನಿರ್ಮಿಸಲಿ, ಪ್ರಿಯದರ್ಶಿನಿ ಶಾಲೆಗೆ ನೀಡಿರುವ ೨ ಎಕರೆ ಜಾಗವು ಪಂಚಾಯಿತಿಗೆ ಸೇರಿದ್ದು, ಈ ಜಾಗವನ್ನು ಮರಳಿ ಪಟ್ಟಣ ಪಂಚಾಯಿತಿ ವಶಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ.ಪಂ. ಸದಸ್ಯೆ ಬಿ. ವಿನುತ ಮಾತನಾಡಿ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಹಳ ಹೆಚ್ಚಾಗಿದ್ದು ಆದ್ದರಿಂದ ಮತ್ತೊಂದು ಬಾರಿ ಬೋರ್ವೆಲ್ ಹಾಕಿಸಬೇಕು. ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬೇರೆ ಸ್ಥಳದಲ್ಲಿ ಬಸ್ ನಿಲ್ದಾಣ ಮಾಡಿದರೆ ಸೂಕ್ತ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್. ರವಿಕುಮಾರ್ ಮಾತನಾಡಿ ಯಾವುದೇ ಸಭೆ-ಸಮಾರಂಭ ನಡೆದರು ಕಡ್ಡಾಯವಾಗಿ ಇಂಜಿನಿಯರ್ ಇರಬೇಕು. ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸ್ಥಳಾವಕಾಶವನ್ನು ನೀಡುವಂತೆ ಕೋರಿದರು. ಹಾಲಿ ಇರುವ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ನಂದಿನಿ ಮಳಿಗೆ ಸ್ತಾಪಿಸಲು ಜಾಗವನ್ನು ನೀಡಲು ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.
ಪಾದಗಟ್ಟೆ ಹತ್ತಿರ ಬಸವಣ್ಣನವರ ಪುತ್ತಳಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿಮಾಡಿದರು. ಪಟ್ಟಣದಲ್ಲಿ ಇರುವ ಬೈಪಾಸ್ ರಸ್ತೆಯ ಡಾಂಬರೀಕರಣ ಕಳಪೆ ಕಾಮಗಾರಿಯಿಂದ ಕೂಡಿದ್ದು ಕಾಮಗಾರಿಯ ಅನುಧಾನವನ್ನು ತಡೆಹಿಡಿಯುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರಿಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಪ.ಪಂ.ಯ ಮಳಿಗೆಗಳ ಬಾಡಿಗೆ ನೀಡದ ಅಂಗಡಿಗಳಿಗೆ ಬೀಗ ಹಾಕುವಂತೆ ಕರವಸೂಲಿಗಾರರಾದ ಸಂದೀಪ್ರವರಿಗೆ ಸರ್ವಸದಸ್ಯರು ಆದೇಶಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ.ಅಧ್ಯಕ್ಷೆ ಮಂಜುಳಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ತಿಪ್ಪೇಸ್ವಾಮಿ, ಮುಖ್ಯಾಧಿಖಾರಿ ಓ.ಶ್ರೀನಿವಾಸ್, ಸದಸ್ಯರಾದ ಜೆ.ಆರ್.ರವಿಕುಮಾರ್, ಸೈಯದ್ ಅನ್ವರ್, ಪಿ.ಓಬಯ್ಯದಾಸ್, ಎನ್.ಮಹಂತಣ್ಣ, ಸುನಿತಮುದಿಯಪ್ಪ, ಈರಮ್ಮ, ಪಾಪಮ್ಮ, ಬೋಸಮ್ಮ ಪಿ., ಬಿ.ವಿನುತ, ಗುರುಶಾಂತಮ್ಮ, ಎಂ.ಟಿ.ಮಂಜುನಾಥ್ ಪ.ಪಂ. ಸಿಬ್ಬಂದಿವರ್ಗ ಹಾಗೂ ಪೌರಕಾರ್ಮಿಕರು ಮುಂತಾದವರು ಇದ್ದರು.

