ನಾಯಕನಹಟ್ಟಿ ಹೋಬಳಿಯ ಎನ್. ದೇವರಹಳ್ಳಿ ಸಮೀಪದ ಪಾಪಮುತ್ತೆಹಳ್ಳದಲ್ಲಿ ಬಳಿ ಇರುವ ರಸ್ತೆಯು ಕೊಚ್ಚಿ ಹೋಗಿದ್ದು ಅಪಾಯಕ್ಕೆ ಅಹ್ವಾನ ನೀಡಿದೆ.

ಗಜ್ಜುಗಾನಹಳ್ಳಿ ನೇರಲಗುಂಟೆ ರಸ್ತೆ ಇದಾಗಿದ್ದು ಇಲ್ಲಿಂದ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ, ಹಲವು ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದೆ. ಆದರೆ ಹಲವು ತಿಂಗಳುಗಳ ಹಿಂದೆ ಸುರಿದ ಮಳೆಯಿಂದಾಗಿ ರಸ್ತೆಯು ಕೊಚ್ಚಿ ಹೋಗಿದ್ದು ಆಳೆತ್ತರದ ಗುಂಡಿ ಬಿದ್ದಿದೆ ಇದರಿಂದಾಗಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರಿಗೆ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.

ಹಗಲು ರಾತ್ರಿಯಿಡೀ ಬೈಕ್ ಟ್ರ್ಯಾಕ್ಟರ್ ಆಟೋ ಬಸ್ಗಳು ಸೇರಿದಂತೆ ನೂರಾರು ವಾಹನಗಳು ಇಲ್ಲಿಂದ ಸಂಚರಿಸುತ್ತಿವೆ, ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕೂಲಿಕಾರ್ಮಿಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ ಆದರೆ ಕುಸಿದು ಬಿದ್ದಿರುವ ರಸ್ತೆಯಲ್ಲಿ ವಾಹನಗಳು ಬೀಳುವ ಸಾಧ್ಯತೆ ಇದೆ. ರಸ್ತೆ ಕೊಚ್ಚಿ ಹೋಗಿರುವುದರಿಂದ ಆಳೆತ್ತರದ ಗುಂಡಿ ಬಿದ್ದು ರಸ್ತೆ ಕೂಡ ಕಿರಿದಾಗಿದ್ದು ಜನರ ಜೀವ ತೆಗೆಯಲು ಈ ಗುಂಡಿ ಬಾಯಿ ತೆರೆದು ನಿಂತಿದೆ.

ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಸರಿಪಡಿಸಿ ರಸ್ತೆ ದುರಸ್ತಿ ಪಡಿಸುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ,ಆದರೂ ಇನ್ನೂ ಕೂಡ ಅಧಿಕಾರಿಗಳು ಎಚ್ಚೆತ್ತಿಲ್ಲ. ಜನರ ಪ್ರಾಣ ಹೋಗುವ ಮುನ್ನ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ರಸ್ತೆ ದುರಸ್ತಿ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದೇ ವೇಳೆ ಸಿ.ರಾಮಸಾಗರ ಪಾಲಯ್ಯ, ನನ್ನಿವಾಳ ಅಜ್ಜಯ್ಯ ಮಾತನಾಡಿದರು.

ಈ ಸಂದರ್ಭದಲ್ಲಿ ಪೂಜಾರಿ ಪ್ರದೀಪ್, ಗೌರಿಪುರ ಶರತ್ ಇದ್ದರು.

About The Author

Namma Challakere Local News
error: Content is protected !!