ಚಳ್ಳಕೆರೆ:- ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೊಸೆದೇವರಹಟ್ಟಿ ಗ್ರಾಮದ ರೈತ ಜಿ.ಬಿ ಮುದಿಯಪ್ಪ ತನ್ನ ಹೊಲದಲ್ಲಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ಪ್ಯಾಕೆಟ್ ನಲ್ಲಿ ತುಂಬಿಟ್ಟ ಈರುಳ್ಳಿಯೂ ಕೊಳೆಯುವ ಹಂತಕ್ಕೆ ತಲುಪಿದೆ.
ಸತತ 20 ದಿನಗಳ ಮಳೆ ಮತ್ತು ಶೀತ ವಾತಾವರಣದಿಂದ ಈರುಳ್ಳಿ ಗಡ್ಡೆ ನಿರೀಕ್ಷೆ ಗಾತ್ರಕ್ಕೆ ಬೆಳೆದಿಲ್ಲ. ಜತೆಗೆ ಶಿಲೀಂದ್ರ ರೋಗಗಳು ಹೆಚ್ಚಾಗಿದ್ದು ಪೈರಿನ ಇಳುವರಿ ಕುಸಿದಿದೆ. ಹೀಗಾಗಿ ಗುಣಮಟ್ಟದ ಬೆಳೆ ರೈತರಿಗೆ ದೊರೆತಿಲ್ಲ. ಈ ನಡುವೆ ಸ್ಥಳೀಯ ಮತ್ತು ಜಿಲ್ಲಾ ಮಾರುಕಟ್ಟೆಗಳಲ್ಲಿ ನೆರೆಯ ರಾಜ್ಯದ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಕುಸಿದಿದೆ. ಈಗಿರುವ ಬೆಲೆಯಲ್ಲಿ ಈರುಳ್ಳಿಯನ್ನು ಬೆಂಗಳೂರು ಮಾರ್ಕೆಟ್ಗೆ ತೆಗೆದುಕೊಂಡು ಹೋದಲ್ಲಿ ಸಾಗಾಣಿಕೆಯ ವೆಚ್ಚ ಕೂಡ ಸಿಗುವುದಿಲ್ಲ ಎನ್ನುವುದು ರೈತನ ನೋವಿನ ಮಾತು.
ಪ್ರತಿ ಎಕರೆಗೆ 40 ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ವ್ಯಯಿಸಿದ ರೈತನು ಉತ್ತಮ ಬೆಲೆಯಲ್ಲಿನ ನಿರೀಕ್ಷೆಯಲ್ಲಿದ್ದ ಆದರೆ ಕಳೆದ ಹಲವು ದಿನಗಳಿಂದ ಸತತವಾಗಿ ಈರುಳ್ಳಿ ದರ ಬಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ರೈತನಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಈರುಳ್ಳಿ ಬೆಳೆಯಿಂದ ನಷ್ಟವಾಗಿರುವ ರೈತರ ಕುಟುಂಬಗಳು ಬೀದಿಗೆ ಬಿದ್ದಿದೆ ಸರ್ಕಾರ ಈಗಲಾದರೂ ಎಚ್ಚೆತ್ತು ಈರುಳ್ಳಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

