“ಶ್ರೀಮದ್ ಭಗವದ್ಗೀತೆಯ ಉಪದೇಶಗಳು ಸಾರ್ವಕಾಲಿಕವಾದವು”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:-ಶ್ರೀಮದ್ ಭಗವದ್ಗೀತೆ ಸದ್ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಉಪದೇಶಗಳು ಸಾರ್ವಕಾಲಿಕವಾದವು ಎಂದು ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಗೀತಾ ಜಯಂತಿ”ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಮದ್ ಭಗವದ್ಗೀತೆ”ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮಾನವನ ಸಕಲ ಸಮಸ್ಯೆಗಳಿಗೂ ಗೀತೆ ಅತ್ಯಂತ ಸುಲಭ ಪರಿಹಾರಗಳನ್ನು ಸೂಚಿಸುತ್ತದೆ. ಇದು ಕರ್ತವ್ಯಶೀಲತೆಯನ್ನು ಎತ್ತಿಹಿಡಿದು ಫಲಗಳನ್ನು ಭಗವಂತನಿಗೆ ಅರ್ಪಿಸಬೇಕೆಂದು ತಿಳಿಸುವ ಹಿಂದೂ ಸನಾತನ ಧರ್ಮದ ಮೇರು ಸದ್ಗ್ರಂಥ ಎಂದು ಗೀತೆಯ ವಿವಿಧ ವಿಶೇಷತೆಗಳ ಬಗ್ಗೆ ವಿವರಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನೆ ಮತ್ತು ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ವಿಶೇಷ ಸತ್ಸಂಗ ಸಭೆಯಲ್ಲಿ ಶ್ರೀಮತಿ ನಂಜಮ್ಮ,ರಂಗಮ್ಮ ಗುಂಡಲ, ಎಂ ಗೀತಾ ನಾಗರಾಜ್,ಶಿವಮ್ಮ, ಪಂಕಜ ಚೆನ್ನಪ್ಪ, ಸರಸ್ವತಿ ನಾಗರಾಜ್,ಎಂ ಲಕ್ಷ್ಮೀದೇವಮ್ಮ, ತಿಪ್ಪಮ್ಮ ಉಮಾಶಂಕರ್, ಜಯಮ್ಮ, ರಾಘವೇಂದ್ರ, ಸರ್ವಮಂಗಳ ಶಿವಣ್ಣ, ಪ್ರಮೀಳಾ ಜಗದೀಶ್, ಗೀತಾ ವೆಂಕಟೇಶರೆಡ್ಡಿ, ಸುವರ್ಣಮ್ಮ ಪಾಲ್ಗೊಂಡಿದ್ದರು.

