ಕಡಬನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಡೀ ರಾಜ್ಯಕ್ಕೆ ಮಾದರಿ ಜಿ.ಟಿ .ಉಮಾ.
ತುರವನೂರು:: ಶಾಸಕ ಟಿ ರಘುಮೂರ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತಮವಾದ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಜಿ.ಟಿ. ಉಮಾ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತುರವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದಲ್ಲಿ 1926ರಲ್ಲಿ ಪ್ರಾರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷಗಳನ್ನು ದಾಟಿದೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ರವರ ಸ್ವಗ್ರಾಮ ಕಡಬನಕಟ್ಟೆ ಗ್ರಾಮದಲ್ಲಿ ಶಾಸಕ ಟಿ ರಘುಮೂರ್ತಿ ರವರು ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ್ದರು ಅದರ ಋಣ ತೀರಿಸಲು ಶಾಸಕರ ಅನುದಾನದಲ್ಲಿ ಉತ್ತಮವಾದ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಜಿಟಿ ಉಮಾ ತಿಳಿಸಿದರು.
ಸಹ ಶಿಕ್ಷಕ ಎಂ. ವಿಶ್ವನಾಥ್ ಮಾತನಾಡಿ, ಶಾಸಕ ಟಿ ರಘುಮೂರ್ತಿಯವರು ಒಂದರಿಂದ ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದ ಹಿನ್ನೆಲೆಯಲ್ಲಿ ತಾನು ಓದಿದ ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕು ಎನ್ನುವ ಹಂಬಲದಿಂದ ಮಾದರಿ ಶಾಲೆಯನ್ನಾಗಿ ನಿರ್ಮಿಸಬೇಕು ಎನ್ನುವ ಹಿತದೃಷ್ಟಿಯಿಂದ ಶಾಸಕರ ಅನುದಾನ ಮತ್ತು ಡಿಎಂಎಫ್ ಅನುದಾನದಡಿಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಿದ್ದು, ಇದರಲ್ಲಿ ಒಟ್ಟು ಎಂಟು ಕೊಠಡಿಗಳಿವೆ,ಪ್ರತಿಯೊಂದು ಕೊಠಡಿಗಳಿಗೆ ಗ್ರಾನೈಟ್ ಮತ್ತು ಟೀಕ್ ಹುಡ್ ನಿಂದ ಬಾಗಿಲುಗಳನ್ನು ನಿರ್ಮಿಸಲಾಗಿದೆ. ಶಾಲೆಯನ್ನು ನೋಡಿದವರಿಗೆ ಎಂತವರಿಗೂ ಕೂಡ ಇದು ಪದವಿ ಕಾಲೇಜು ಎಂದು ಭಾಸವಾಗುತ್ತದೆ. ಪ್ರಸ್ತುತವಾಗಿ 137 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಐದು ಜನ ಖಾಯಂ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರು ಇದ್ದಾರೆ.
ಜನವರಿ ಅಥವಾ ಮಾರ್ಚ್ ಅಂತ್ಯದೊಳಗಾಗಿ ಈ ಶಾಲೆ ಉದ್ಘಾಟನೆ ಭಾಗ್ಯ ಕಾಣಲಿದ್ದು ಅಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ತಾನು ಓದಿದ ಶಾಲೆಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಿದ ರಘುಮೂರ್ತಿಯವರಿಗೆ ಕೃತಜ್ಞತೆಗಳು ಎಂದರು.
ವಿಜ್ಞಾನ ಶಿಕ್ಷಕ ಎಸ್ ಗಿರೀಶ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಕಲಿಕೆ ಈಗಿನ ಮಕ್ಕಳಿಗೆ ತುಂಬಾ ಅವಶ್ಯಕವಾಗಿದೆ ಇದನ್ನು ಮನಗಂಡ ಶಾಸಕ ಟಿ. ರಘುಮೂರ್ತಿಯವರು 5 ಕಂಪ್ಯೂಟರ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ, ಅಷ್ಟೇ ಅಲ್ಲದೆ ಕೆಎಂಎಸ್ ಪಿಯಿಂದ 15 ಕಂಪ್ಯೂಟರ್ ಗಳನ್ನು ನೀಡಿರುವುದರಿಂದ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಕಲಿಸಲು ತುಂಬಾ ಅನುಕೂಲವಿದೆ, ಪ್ರತಿ ತರಗತಿಗಳಿಗೆ ಸ್ಮಾರ್ಟ್ ಕ್ಲಾಸ್ ಇದೆ, ಇದರಿಂದಾಗಿ ಅನುಭವಾತ್ಮಕ ಕಲಿಕೆ ವಿದ್ಯಾರ್ಥಿಗಳಲ್ಲಿ ಉಂಟಾಗುತ್ತದೆ ವಿಜ್ಞಾನ ಕಲಿಕೆಗಳಿಗೆ ಲ್ಯಾಬ್ ಇರುವುದರಿಂದ ಲ್ಯಾಬ್ ಗಳಲ್ಲಿ ವಿದ್ಯಾರ್ಥಿಗಳು ಪ್ರಯೋಗ ಮಾಡಿ ಹೆಚ್ಚಿನ ಅನುಭವ ಪಡೆದು ಕ್ರಿಯಾಶೀಲರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಹಶಿಕ್ಷಕಿ ಜಿ.ಟಿ ಸುಮಾ. ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು

