ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದವರ ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು- ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದವರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ದೇಶ ಬಾಂಧವರಿಗೆ ಕರೆ ನೀಡಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸ್ವಾತಂತ್ರ್ಯದ ವಿವಿಧ ಮಜಲುಗಳ ಬಗ್ಗೆ ಪ್ರವಚನ ನೀಡಿದರು. ಸ್ವಾತಂತ್ರ್ಯದ ನಿಜವಾದ ಮೌಲ್ಯ ತಿಳಿವುದು ಪರತಂತ್ರದ ಮಹಿಮೆ ತಿಳಿದಾಗ ಮಾತ್ರ. ಸ್ವಾತಂತ್ರ್ಯವು ಸ್ವಚ್ಛಂದವಾಗದೆ ಅದು ಜವಾಬ್ದಾರಿಯಾಗಬೇಕು‌. ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆದು ನವಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು. ಸ್ವಾತಂತ್ರೋತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವನಜಾಕ್ಷಿ ಮೋಹನ್, ಲಕ್ಷ್ಮೀ ಮತ್ತು ಪುಷ್ಪಲತಾ ಅವರಿಂದ ವಿವಿಧ ದೇಶಭಕ್ತಿ ಗೀತೆಗಳ ಗಾಯನ ಹಾಗೂ ಸದ್ಭಕ್ತರಿಂದ ಸಮೂಹ ಗಾಯನ ನಡೆಯಿತು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ, ಯತೀಶ್ ಎಂ ಸಿದ್ದಾಪುರ, ಚೆನ್ನಕೇಶವ, ಸಂತೋಷಕುಮಾರ ಅಗಸ್ತ್ಯ, ಪುಷ್ಪಲತಾ ಅವರು ಭಾಷಣ ಮಾಡಿದರು. ಕಾರ್ಯಕ್ರಮದ ಸೊಗಸಾದ ನಿರೂಪಣೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ನೇತಾಜಿ ಪ್ರಸನ್ನ, ಶ್ರೀಮತಿ ಜಿ ಯಶೋಧಾ ಪ್ರಕಾಶ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಹೂವಿನ ಲಕ್ಷ್ಮೀದೇವಮ್ಮ, ಎಂ.ಗೀತಾ ನಾಗರಾಜ್ ಸುಧಾಮಣಿ, ಸೌಮ್ಯ ಪ್ರಸಾದ್, ಶಾರದಮ್ಮ,ಲಕ್ಷ್ಮೀ,‌ ಅಂಬುಜಾ ಶಾಂತಕುಮಾರ್, ಕವಿತಾ ಗುರುಮೂರ್ತಿ, ಶ್ರೀಪಾದ್, ವೆಂಕಟೇಶ್ ರೆಡ್ಡಿ, ಸುರೇಶ್,ಪಂಕಜ ಚೆನ್ನಪ್ಪ,ಅಕ್ಷಯ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!