ನಾಯಕನಹಟ್ಟಿ:ಜಿಲ್ಲೆಯಲ್ಲಿ ಮುಂಗಾರಿಗೂ ಮುನ್ನವೇ ಮಳೆಯಾದ ಪರಿಣಾಮ ದಾಳಿಂಬೆ ಬೆಳೆಗೆ ಪ್ರತಿಕೂಲ ವಾತಾವರಣ ಏರ್ಪಟ್ಟ ಪರಿಣಾಮವಾಗಿ ಸಹಜವಾಗಿಯೇ ದುಂಡಾಣು ಬಾಧೆ ದಾಳಿಂಬೆ ಬೆಳೆಗಾರರ ಪಾಲಿಗೆ ಮಹಾಮಾರಿಯಾಗಿದೆ.
ಹೌದು.. ಹವಾಮಾನದ ವೈಪರೀತ್ಯದಿಂದಾಗಿ ಹಾಗು ಮುಂಗಾರು ಪೂರ್ವ ಸುರಿದ ಮಳೆಯಿಂದ ದಾಳಿಂಬೆ ಬೆಳೆಗೆ ತಗುಲಿದ ದುಂಡಾಣು ಮಚ್ಚೆರೋಗದಿಂದಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಎನ್ ದೇವರಹಳ್ಳಿ ಗ್ರಾಮದ ರಮೇಶ್ ಎಂಬುವ ರೈತ ಬೆಳೆನಷ್ಟವಾಗಿ ಲಕ್ಷಾಂತರ ರೂಪಾಯಿ ಅನುಭವಿಸಿದ್ದಾನೆ.
ದುಂಡಾಣು ಅಂಗಮಾರಿ (ಚುಕ್ಕೆ) ರೋಗವು ದಾಳಿಂಬೆ ಬೆಳೆಯ ಕಾಂಡ, ಎಲೆ, ಹೂವು, ಕಾಯಿ ಕಟ್ಟುವ ವೇಳೆಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ದಾಳಿಂಬೆ ಒಣಹವೆಯಲ್ಲಿ ಉತ್ತಮವಾಗಿ ಇಳುವರಿ ನೀಡುವ ಬೆಳೆಯಾಗಿದೆ. ಆದರೆ ಮುಂಗಾರು ಪೂರ್ವ ಮಳೆ ಮತ್ತು ಹವಾಮಾನ ವೈಪರಿತ್ಯದಿಂದಾಗಿ ರೈತ ನಷ್ಟಪೀಡಾಗಿದ್ದಾನೆ.
ರೋಗದ ಲಕ್ಷಣಗಳು:-ದಾಳಿಂಬೆ ಗಿಡದ ಎಲೆಗಳ ಮೇಲೆ ಹಳದಿ ಉಂಗುರದಿಂದ ಆವೃತವಾದ ಕಂದು, ಕಪ್ಪು ಚುಕ್ಕೆಗಳು ಕಂಡು ಬಂದು ಎಲೆ ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ. ರೋಗವು ಕಾಂಡಗಳಿಗೂ ಹಬ್ಬಿ ರೆಂಬೆಗಳನ್ನು ಒಣಗುವಂತೆ ಮಾಡುತ್ತದೆ. ಹೂಗಳ ಮೇಲೆ ರೋಗಬಾಧೆ ಕಂಡು ಬಂದರೆ ಹೂ ಉದುರುತ್ತವೆ. ಒಂದು ಕಾಯಿಯಿಂದ ಮತ್ತೊಂದು ಕಾಯಿಗೆ ಹರಡುತ್ತದೆ. ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು ಕ್ರಮೇಣ ಚುಕ್ಕೆಗಳು ವೃದ್ಧಿಯಾಗಿ ಹಣ್ಣುಗಳ ಮೇಲೆ ತುಂಬೆಲ್ಲಾ ಆವರಿಸಿ ಹಣ್ಣುಗಳು ಸೀಳುವಂತೆ ಹಾಗೂ ಕೊಳೆಯುವಂತೆ ಮಾಡುತ್ತವೆ.ಕೀಟ ಬಾಧೆ ಹಾಗೂ ಉಷ್ಣ ಮಿಶ್ರಿತ ತೇವಾಂಶದ ವಾತಾವರಣವಿದ್ದಲ್ಲಿ ರೋಗ ತೀವ್ರವಾಗಿ ಹರಡಿ ಬಹಳ ಹಾನಿಯನ್ನುಂಟು ಮಾಡುತ್ತದೆ.ಇದರಿಂದಾಗಿ ಚುಕ್ಕಿ ರೋಗ ಹರಡಿ ಬಣ್ಣ ಮತ್ತು ಕಳೆ ಹಾಳಾಗಿ ದಾಳಿಂಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ.
ಡಿ.ಎನ್ ರಮೇಶ್ ದಾಳಿಂಬೆ ಬೆಳೆಗಾರ ಮೂಲೆ ಮನೆ ತೋಟ ಎನ್ ದೇವರಹಳ್ಳಿ
ಮೂರು ವರ್ಷಗಳಹಿಂದೆ ಮಹಾರಾಷ್ಟ್ರದಿಂದ ಜೈಂತಳಿಯ ದಾಳಿಂಬೆ ಸಸಿಗಳನ್ನು 47 ರೂಪಾಯಿಯಂತೆ ತಂದು ನಾಲ್ಕು ಎಕರೆಯಲ್ಲಿ 1500 ಗಿಡಗಳನ್ನು ನಾಟಿ ಮಾಡಿದ್ದೇನೆ. ಕಳೆದ ವರ್ಷ ಕಟಾವು ಮಾಡಿದಾಗ 4 ಲಕ್ಷ ರೂಪಾಯಿ ಲಾಭ ಬಂದಿತ್ತು ಆದರೆ ಇದೀಗ ಮುಂಗಾರು ಪೂರ್ವ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ನಮ್ಮ ಹಣ್ಣಿಗೆ ಬೆಲೆ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದೇವೆ ಇದರಿಂದಾಗಿ 5 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

