ಶಾಸಕ ಎನ್ ವೈ ಗೋಪಾಲಕೃಷ್ಣರಿಂದ ಅಲ್ಪಸಂಖ್ಯಾತರಿಗೆ ಅನ್ಯಾಯ.
ನಾಯಕನಹಟ್ಟಿ : ಪಟ್ಟಣದ ಅಲ್ಪಸಂಖ್ಯಾತ ಸಮುದಾಯದವರಿಗೆ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣರಿಂದ ಅನ್ಯಾಯವಾಗಿದೆ ಎಂದು ಮುಖಂಡ ಜಾವಿದ್ ಭಾಷಾ ಗಂಭೀರ ಆರೋಪ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊಳಕಾಲ್ಮೂರು ಶಾಸಕ ಎನ್. ವೈ ಗೋಪಾಲಕೃಷ್ಣರವರು ಸತತ 6 ಬಾರಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿಗೆ ಅಲ್ಪಸಂಖ್ಯಾತರು ಕೂಡ ಮತ ಹಾಕಿದ್ದಾರೆ, ಆದರೆ ಅವರಿಂದ ನಮ್ಮ ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಶಾಸಕರು ಮುಸ್ಲಿಮರ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅನ್ಯಜಾತಿಯವರಿಗೆ ದೇವಸ್ಥಾನ, ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಾರೆ. ಆದರೆ ಸುಮಾರು 25 ರಿಂದ 30 ವರ್ಷದಿಂದ ನಮ್ಮ ಸಮುದಾಯದ ಶಾದಿ ಮಹಲ್ ಅನುದಾನ ಇಲ್ಲದೆ ಕಾಮಗಾರಿ ಪೂರ್ಣಗೊಳ್ಳದೆ ನಿಂತಿದೆ. ಈ ಅವಧಿಯಲ್ಲಿ ನಮ್ಮ ಶಾಸಕರು ಒಂದು ದಿನವೂ ನಮ್ಮ ಅಲ್ಪಸಂಖ್ಯಾತರ ಬಗ್ಗೆ ಗಮನ ಹರಿಸದೆ ಇರುವುದು ಶೋಚನೀಯ ಸಂಗತಿ.
ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಆಶ್ವಾಸನೆ ನೀಡುತ್ತಾರೆ, ಗೆದ್ದ ಮೇಲೆ ಅಲ್ಪಸಂಖ್ಯಾತರನ್ನು ಕಡೆಗಣಿಸುವುದು ಯಾವ ನ್ಯಾಯ. ನಮ್ಮ ಕ್ಷೇತ್ರದಲ್ಲಿ ಸುಮಾರು 30 ಸಾವಿರ ಅಲ್ಪಸಂಖ್ಯಾತರ ಮತದಾರರು ಇದ್ದೇವೆ. ಶಾಸಕರು ಅಲ್ಪಸಂಖ್ಯಾತರಿಗೆ ಅವರ ಅವಧಿಯಲ್ಲಿ ಯಾವ ಅನುದಾನ ನೀಡಿದ್ದಾರೆ ತೋರಿಸಲಿ? ಅಲ್ಪಸಂಖ್ಯಾತರು ಕೇವಲ ವೋಟ್ ಬ್ಯಾಂಕ್ ಗೋಸ್ಕರ ಬೇಕಾಗಿದ್ದಾರೆಯೇ? ಮತ ಹಾಕಲು ಅಲ್ಪಸಂಖ್ಯಾತರು ಬೇಕು, ಅಲ್ಪಸಂಖ್ಯಾತರಿಗೆ ಅನುದಾನ ಬೇಡವೇ? ಸತತ ಏಳು ಬಾರಿ ಗೆಲುವು ಸಾಧಿಸಿರುವ ಶಾಸಕರಿಗೆ ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಆಶಯ.
ಅನ್ಯ ಜನಾಂಗದವರಿಗೆ ಅನುದಾನ ನೀಡಿದಂತೆ, ಅಲ್ಪಸಂಖ್ಯಾತರಿಗೆ ಅನುದಾನ ನೀಡಿ ಕುಂಠಿತವಾಗಿರುವ ಶಾದಿ ಮಹಲ್ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಸಮುದಾಯದ ಮೇಲೆ ಕರುಣೆ ತೋರಿಸಿ ಅನುದಾನ ಬಿಡುಗಡೆಗೊಳಿಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಬಿವುಲ್ಲಾ, ಕಲಂದರ್, ಇಕ್ಬಾಲ್, ಶಶಾವಲಿ, ಇಸಾಕ್, ಗೌಸ್ ಪೀರ್, ಮೊಬ್ಬಶೀರ್, ಜಬಿವುಲ್ಲಾ ಇನ್ನು ಮುಂತಾದವರು ಇದ್ದರು.

