“ಶ್ರೀರಾಮಕೃಷ್ಣರು ಶ್ರೀಮಾತೆಯವರನ್ನು ಜಗನ್ಮಾತೆಯಾಗಿ ಪೂಜಿಸಿದ ದಿನವೇ ಫಲಹಾರಿಣಿ ಕಾಳಿ ಪೂಜೆ”-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅನಿಸಿಕೆ.
ಚಳ್ಳಕೆರೆ- ಶ್ರೀರಾಮಕೃಷ್ಣರು ಶ್ರೀಮಾತೆ ಶಾರದಾದೇವಿಯವರನ್ನು ಜಗನ್ಮಾತೆಯಾಗಿ ಪೂಜಿಸಿದ ದಿನವೇ ಫಲಹಾರಿಣಿ ಕಾಳಿ ಪೂಜೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.
ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಫಲಹಾರಿಣಿ ಕಾಳಿ ಪೂಜೆಯ” ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಫಲಹಾರಿಣಿ ಕಾಳಿ ಪೂಜೆಯ ವಿಶೇಷತೆಗಳ” ಬಗ್ಗೆ ಉಪನ್ಯಾಸ ನೀಡಿದರು.ವೈಶಾಖ ಮಾಸದ ಅಮಾವಾಸ್ಯೆಯ ದಿನದಂದು ಫಲಹಾರಿಣಿ ಕಾಳಿ ಪೂಜೆಯನ್ನು ಮಾಡುತ್ತಾರೆ.
ಈ ಪೂಜೆಯು ಪಶ್ಚಿಮ ಬಂಗಾಳದಲ್ಲಿ ಬಹಳ ಪ್ರಸಿದ್ಧವಾದದ್ದು.ಈ ದಿನದಂದೇ ಅವತಾರ ಪುರುಷರಾದ ಶ್ರೀರಾಮಕೃಷ್ಣರು ಹದಿನಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸಿ ಶಾರದಾಮಾತೆಯವರನ್ನು ಮಹಾಕಾಳಿಯಾಗಿ ಪೂಜಿಸುತ್ತಾರೆ. ಫಲಹಾರಿಣಿ ಕಾಳಿಯು ಮನುಷ್ಯನ ಕೆಟ್ಟ ಕರ್ಮಗಳನ್ನು ನಾಶ ಮಾಡುತ್ತಾಳೆ.
ಈ ಪೂಜೆಯ ಮೂಲಕ ಶ್ರೀಮಾತೆಯವರು ಸಾಕ್ಷಾತ್ ದೇವಿ ಎಂಬ ಸತ್ಯ ಜಗತ್ತಿನ ಮುಂದೆ ಸಾಬೀತಾಯಿತು ಎಂದು ತಿಳಿಸಿದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ಸಂನ್ಯಾಸಿ ಗೀತೆ ಗಾಯನ ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ, ತಿಪ್ಪಮ್ಮ ಉಮಾಶಂಕರ್, ಶಾಂತಮ್ಮ ಶಾಂತವೀರಪ್ಪ, ಜಯಶೀಲಮ್ಮ , ಯತೀಶ್ ಎಂ ಸಿದ್ದಾಪುರ, ಭಾಗ್ಯಲಕ್ಷ್ಮೀ,ಶೈಲಜ ಶ್ರೀನಿವಾಸ್ , ಕೃಷ್ಣವೇಣಿ ವೆಂಕಟೇಶ್, ರಶ್ಮಿ ವಸಂತ , ರಶ್ಮಿ ರಮೇಶ್, ನಾಗರತ್ನಮ್ಮ, ವೀರಮ್ಮ, ಮೀನಾಕ್ಷಿ ಉಪಸ್ಥಿತರಿದ್ದರು.

