ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಬಹುಕಾಲ ಉಳಿಯುತ್ತದೆ : ಪ್ರೊ.ಜಿ.ವಿ.ಶ್ರೀರಾಮರೆಡ್ಡಿ
ಚಳ್ಳಕೆರೆ : ವಸ್ತುನಿಷ್ಠ ಸೃಜನಶೀಲ ಸಾಹಿತ್ಯ ಸಮಾಜದಲ್ಲಿ ಬಹುಕಾಲ ಉಳಿಯುವುದರ ಜತೆಗೆ ಅದು ಮನುಷ್ಯನ ಸಾಮಾಜಿಕ ಬದುಕಿಗೆ ದಾರಿ ತೋರಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರೊ.ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಐಕ್ಯೂಎಸಿ ಸಮಿತಿ ಇವುಗಳ ಸಹಯೋಗದಲ್ಲಿ ನಗರದ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕಾಲ ಕಾಲಕ್ಕೆ ಬದಲಾವಣೆಗೊಳ್ಳುವ ಮೂಲಕ ಅದು ಸದಾ ಜೀವಂತಿಕೆ ಪಡೆದುಕೊಳ್ಳುವುದಲ್ಲದೆ ವರ್ತಮಾನದ ಸತ್ಯವನ್ನು ಅನಾರಣಗೊಳಿಸುತ್ತದೆ.
ಕನ್ನಡ ಸಾಹಿತ್ಯ ಚರಿತ್ರೆ ಕ್ರಮಬದ್ಧ ಅಧ್ಯಯನ ಮಾಡುವ ಮೂಲಕ ಆಯಾ ಕಾಲದ ಮತ, ಧರ್ಮ, ಸಾಮಾಜಿಕ ಪರಿಸರ ಮತ್ತು ಸಾಹಿತ್ಯ ರಚನೆಯ ವಸ್ತು ವಿಷಯ ಸುಲಭವಾಗಿ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಬಿ.ಎಸ್.ಮಂಜುನಾಥ್ ಮಾತನಾಡಿ, ಆಳವಾದ ಸಾಹಿತ್ಯ ಅಧ್ಯಯನ ಮಕ್ಕಳಲ್ಲಿ ಹೊಸ ಚಿಂತನೆ ಮೂಡಿಸುತ್ತದೆ. ಶ್ರದ್ಧೆ, ಪರಿಶ್ರಮ ಹಾಗೂ ಆಸಕ್ತಿಯಿಂದ ಓದಬೇಕು. ಕನ್ನಡದಲ್ಲಿಯೇ ಐಎಎಸ್, ಕೆಎಎಸ್ ಮುಂತಾದ ಪರೀಕ್ಷೆ ಬರೆದು ಉನ್ನತ ಹುದ್ದೆ ಹಿಡಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಶಿವಾನಂದಯ್ಯ, ಐಕ್ಯೂಎಸಿ ಸಂಚಾಲಕ ಪ್ರೊ.ಚನ್ನಕೇಶವ, ಸಹ ಪ್ರಾಧ್ಯಾಪಕ ಪ್ರೊ.ಎನ್.ಜಗನ್ನಾಥ್, ಪ್ರೊ.ಚಿತ್ತಯ್ಯ ಮಾತನಾಡಿದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ.ಜಿ.ವಿ.ರಾಜಣ್ಣ, ಪ್ರೊ.ಎಂ.ಮುರಳಿ, ಪ್ರೊ.ಎ.ಎಸ್.ಸತೀಶ್, ಉಪನ್ಯಾಸಕ ಎಚ್.ಪಿ.ಮಹಂತೇಶ್, ಪಾಪಯ್ಯ ಇದ್ದರು.
….

