“ಸ್ವಾಮಿ ಅದ್ಭುತಾನಂದರ ಗುರುಭಕ್ತಿ ಅಸಾಧಾರಣವಾದದ್ದು”:-ಶ್ರೀಮತಿ ಯಶೋಧಾ ಪ್ರಕಾಶ್ ಹೇಳಿಕೆ. ಚಳ್ಳಕೆರೆ:-ಸ್ವಾಮಿ ಅದ್ಭುತಾನಂದರು ಶ್ರೀರಾಮಕೃಷ್ಣರ ಮೇಲಿಟ್ಟಿದ್ದ ಗುರುಭಕ್ತಿ ಅಸಾಧಾರಣವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ “ಸ್ವಾಮಿ ಅದ್ಭುತಾನಂದರ” ಜಯಂತ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅವತಾರ ಪುರುಷರಾದ ಶ್ರೀರಾಮಕೃಷ್ಣರ ಹದಿನಾರು ಮಂದಿ ನೇರ ಸಂನ್ಯಾಸಿ ಶಿಷ್ಯರಲ್ಲಿ ಮೊದಲನೆಯವರೇ ಸ್ವಾಮಿ ಅದ್ಬುತಾನಂದರು, ಇವರ ವೈಶಿಷ್ಟ್ಯವೆಂದರೆ ಆ ಎಲ್ಲ ಶಿಷ್ಯರ ಮಧ್ಯೆ ಶಾಸ್ತ್ರಪಾಂಡಿತ್ಯದ ಮಾತಂತಿರಲಿ- ಓದುಬರಹವೂ ಬಾರದಿದ್ದ ಏಕಮೇವ ವ್ಯಕ್ತಿ ಎಂದರೆ ಸ್ವಾಮಿ ಅದ್ಭುತಾನಂದರು ಎಂದು ಹೇಳಬಹುದು. ಶ್ರೀರಾಮಕೃಷ್ಣರ ಸೇವೆಯನ್ನು ಏಕನಿಷ್ಠೆಯಿಂದ ಮಾಡುತ್ತಿದ್ದ ಸ್ವಾಮಿ ಅದ್ಭುತಾನಂದರಿಗೆ ಗುರುವಿನ ಶುಶ್ರೂಷೆಯೇ ಅವರ ಪಾಲಿನ ಮುಖ್ಯ ಆಧ್ಯಾತ್ಮಿಕ ಸಾಧನೆಯಾಯಿತು. ತನ್ನ ಗುರುವಿನಂತೆಯೇ ಜ್ಞಾನಭಂಡಾರವನ್ನೇ ಸ್ವಾಧೀನಪಡಿಸಿಕೊಂಡಿದ್ದ ಅವರಿಗೆ ಒಮ್ಮೆ ಶ್ರೀರಾಮಕೃಷ್ಣರು ಹೇಳುತ್ತಾರೆ:-ಲೇಟೋ, ವೇದ ವೇದಾಂತಗಳು ನಿನ್ನ ಮುಖದಿಂದ ತಾನಾಗಿಯೇ ಹರಿದುಬರುತ್ತವೆ!ಎಂದು.ಈ ಮಾತು ಮುಂದೆ ಅಕ್ಷರಶಃ ಸತ್ಯವಾಗಿ ಪರಿಣಮಿಸಿತು ಎಂದು ಸ್ವಾಮಿ ಅದ್ಭುತಾನಂದರ ಜೀವನದ ಅನೇಕ ಘಟನೆಗಳನ್ನು ಉಲ್ಲೇಖಿಸಿ ಅವರು ಮಾತನಾಡಿದರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ, “ವಿಶೇಷ ಭಜನೆ” ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜ್ಯೋತಿ,ಶಾಂತಮ್ಮ, ಪ್ರೇಮಲೀಲಾ, ಸಂಗೀತ,ಶೈಲಜ, ವಿಜಯಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ,ರಶ್ಮಿ ರಮೇಶ್,ಶಾರದಾಮ್ಮ, ಜಯಶೀಲಮ್ಮ, ಸುಮನ ಕೋಟೇಶ್ವರ , ದ್ರಾಕ್ಷಾಯಣಿ,ಕೆ.ಎಸ್ ವೀಣಾ, ಸೌಮ್ಯ ,ವಿಮಲ ನಾಗರಾಜ್, ಕೃಷ್ಣವೇಣಿ, ವೀರಮ್ಮ,ಗೀತಾಲಕ್ಷ್ಮೀ, ಮೀನಾಕ್ಷಿ ಪಾಲ್ಗೊಂಡಿದ್ದರು.

