ಕುಂದಾಪುರ : ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಲವಾರು ರಾಷ್ಟ್ರೀಯ ಹಬ್ಬಗಳು ಸಂಭ್ರಮದ ಕಳೆಗಟ್ಟುತ್ತಿವೆ. ಅದರಲ್ಲೂ ಕೂಡ ಗಣರಾಜ್ಯೋತ್ಸವ ಅಂತೂ ಪ್ರತಿವರ್ಷವೂ ಒಂದೊಂದು ವಿಶೇಷತೆಗೆ ಸಾಕ್ಷಿಯಾಗುತ್ತದೆ. ಕಡುಬಡವರಿಂದ ಹಿಡಿದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲಿನ ವಿಶೇಷತೆಯನ್ನು ಗುರುತಿಸಿ ಅವರನ್ನು ದೆಹಲಿಯ ಕಾರ್ಯಕ್ರಮಕ್ಕೆ, ಸಂಭ್ರಮಕ್ಕೆ ಆಗಮಿಸುವುದು ಪ್ರಧಾನಿ ಮೋದಿ ಸರ್ಕಾರದ ಒಂದು ಹೆಗ್ಗಳಿಕೆ. ಅಂತೆಯೇ ಇದೀಗ ಬೀದಿ ಬದಿ ಚಪ್ಪಲಿ ಹೊಲಿಯುವ ವ್ಯಕ್ತಿಯೊಬ್ಬನಿಗೆ ಈ ಬಾರಿ ದೆಹಲಿಯ ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿದೆ.

ಹೌದು, ಉಡುಪಿ ಜಿಲ್ಲೆಯ, ಕುಂದಾಪುರದಲ್ಲಿ ಶಾಸ್ತ್ರೀ ಸರ್ಕಲ್‌ನಲ್ಲಿ ಲಿಡ್ಕರ್‌ನ ಪಾದರಕ್ಷೆ ರಿಪೇರಿ ಮಾಡುವ ಪೆಟ್ಟಿಗೆ ಅಂಗಡಿ ನಡೆಸುತ್ತಾ, ಸ್ವಾಭಿಮನದಿ ದುಡಿಯುತ್ತಿರುವ ಮಣಿಕಂಠ (38 ಅವರನ್ನು ಈ ಬಾರಿ ಗಣರಾಜ್ಯೋತ್ಸವ ಆಚರಣೆಗೆ ಕೇಂದ್ರ ಸರ್ಕಾರವು ಆಹ್ವಾನಿಸಿದೆ. ಕೇಂದ್ರದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ ಮೂಲತಃ ಭದ್ರಾವತಿಯವರಾದ ಅವರ ಅಜ್ಜ ಮುನುಸ್ವಾಮಿ ಸುಮಾರು 50 ವರ್ಷಗಳ ಹಿಂದೆ ಇಲ್ಲಿಗೆ ಬಂದು ಈ ಚಪ್ಪಲಿ ರಿಪೇರಿ ಅಂಗಡಿಯನ್ನು ಆರಂಭಿಸಿದರು. ಸ್ವಲ್ಪ ಸಮಯ ಮಣಿಕಂಠ ಅವರ ತಂದೆ ಇದನ್ನು ಮುಂದುವರಿಸಿದರು, ಅವರ ಅನಾರೋಗ್ಯದ ಮಣಿಕಂಠ ಈ ಕುಲಕಸುಬನ್ನು ಮುನ್ನಡೆಸುತ್ತಿದ್ದಾರೆ.

ಯಾಕೆ ಈ ಆಹ್ವಾನ ? ಮಣಿಕಂಠ ಮಾಡಿದ್ದೇನು ?

ಪಟ್ಟ ದುಡಿಯುತ್ತಾ ತುಂಬು ಸಂಸಾರವನ್ನು ನಿಭಾಯಿಸುತ್ತಿದ್ದಂತಹ ಮಣಿಕಂಠರವರು ಹಣ ಸಾಲದೇ ಇದ್ದಾಗ ಸಾಲ ಪಡೆಯುತ್ತಿದ್ದರು. ದುಡಿದ ಹಣವೆಲ್ಲವು ಸಾಲ ತೀರಿಸಲು, ಬಡ್ಡಿ ತೀರಿಸಲು ಸರಿಹೊಂದುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಅವರಿಗೆ ಪಿಎಂ ಸ್ವನಿಧಿ (ಬೀದಿ ವ್ಯಾಪಾರಿಗಳಿಗೆ ನೀಡುವ ಸಾಲ) ಯೋಜನೆಯಡಿ 10 ಸಾವಿರ ರು. ಸಾಲ ನೀಡಿತು. ಶೇ.7ರ ಬಡ್ಡಿ ದರದ ಈ ಸಾಲ ಮರುಪಾವತಿಗೆ 12 ತಿಂಗಳು ಅವಧಿ ಇದ್ದರೂ ಮಣಿಕಂಠ 2,500 ರು.ನಂತೆ ಕಟ್ಟಿ ಐದೇ ತಿಂಗಳಲ್ಲಿ ತೀರಿಸಿದರು.

ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದ್ದನ್ನು ಮೆಚ್ಚಿ ಇಲಾಖೆ ಇನ್ನೂ 20 ಸಾವಿರ ರು. ಸಾಲ ನೀಡಿತು. ಅದರಿಂದ ಈ ಮಳೆಗಾಲದಲ್ಲಿ ಬೇಕಾಗುವ ಚಪ್ಪಲಿ ಮತ್ತು ಕೊಡೆಗಳನ್ನು ತಂದು ಮಾರಾಟ ಮಾಡಿ ಯಶಸ್ವಿಯೂ ಆದರು. ಲಾಭವನ್ನೂ ಗಳಿಸಿದರು, ಐದೇ ತಿಂಗಳಲ್ಲಿ ಪೂರ್ತಿ ಸಾಲ ಮರುಪಾವತಿಸಿದರು. ಮಣಿಕಂಠ ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಇಲಾಖೆ ಮತ್ತೆ 50 ಸಾವಿರ ರೂ ಸಾಲ ಮಂಜೂರು ಮಾಡಿದೆ.

ಮಣಿಕಂಠ ಹೇಳಿದ್ದೇನು?

ದೆಹಲಿಯ ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಮಣಿಕಂಠ ಅವರು ‘ತುಂಬಾ ಸಂತೋಷವಾಗಿದೆ. ನಮ್ಮಂತವರನ್ನು ಕೂಡ ಸರ್ಕಾರವು ಗುರುತಿಸಿ ದೇಶದ ರಾಜಧಾನಿ ದೆಹಲಿಗೆ ಆಹ್ವಾನಿಸುತ್ತದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ. ನಾವು ಪ್ರಧಾನಿ ಮೋದಿ ಅವರಿಗೆ ಎಂದಿಗೂ ಚಿರಋಣಿಯಾಗಿರುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲದೆ ನಮಗೆ ದೊರೆತಂತಹ ಸಾಲ ಕಡಿಮೆ. ಆದರೆ ಬಡ್ಡಿ ಮೊತ್ತವು ಕೂಡ ತುಂಬಾ ಕಡಿಮೆ. ಹಾಗಾಗಿ ನಮ್ಮನ್ನು ನಂಬಿ ಸರ್ಕಾರ ಸಾಲ ನೀಡುತ್ತದೆ. ನಾವು ಕೂಡ ಅದನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕಾಗುತ್ತದೆ. ಅದೇ ರೀತಿ ನಾನು ಒಬ್ಬ ಸಾಮಾನ್ಯನು ಮಾಡುವ ಕೆಲಸವನ್ನು ಮಾಡಿದ್ದೇನೆ. ನನ್ನ ಜವಾಬ್ದಾರಿ ಅದು. ಆದರೆ ಸರ್ಕಾರ ನಮ್ಮನ್ನು ಗುರುತಿಸಿರುವುದು ನಿಜಕ್ಕೂ ಕೂಡ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Namma Challakere Local News

You missed

error: Content is protected !!