ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ರಸ್ತೆ ವಿಭಜಕಗಳ ಕುರಿತು ಚರ್ಚೆ ನಡೆಯಿತು.
ಮಂಗಳವಾರದ ವಿಧಾನ ಸಭಾ ಕಲಾಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಈ ಕುರಿತು ಪ್ರಶ್ನಿಸಿ, ಸರ್ಕಾರದ ಗಮನ ಸೆಳೆದರು. ಐತಿಹಾಸಿಕವಾಗಿರುವ ಚಿತ್ರದುರ್ಗ ನಗರದಲ್ಲಿ ಮೊದಲಿನಿಂದಲೂ ಚಿಕ್ಕ ರಸ್ತೆಗಳು ಇವೆ. ನಗರದ ಮುಖ್ಯ ರಸ್ತೆ ಕೇವಲ 40 ಅಡಿ ಅಗಲವಿದೆ. ಇದರ ಮಧ್ಯ 5 ಎತ್ತರ ಹಾಗೂ 4 ಅಡಿ ಅಗಲದ ರಸ್ತೆ ವಿಭಜಕಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು, ಪಾದಚಾರಿಗಳು, ವ್ಯಾಪಾರಿಗಳು ಬವಣೆ ಪಡುವಂತೆಯಾಗಿದೆ. ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು.
ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದಿಂದ ಗಾಂಧಿ ವೃತ್ತ ಸಂಪರ್ಕಿಸುವ ರಸ್ತೆ ಕಳೆದ 35 ವರ್ಷಗಳಿಂದ ಏಕಮುಖ ಸಂಚಾರದ ರಸ್ತೆಯಾಗಿದೆ. ಕಿರಿದಾದ ಏಕಮುಖ ರಸ್ತೆಯಲ್ಲೂ ದೊಡ್ಡ ರಸ್ತೆ ವಿಭಜಕಗಳನ್ನು ನಿರ್ಮಿಸಿರುವುದರಿಂದ ಕೇವಲ 10 ರಿಂದ 12 ಅಡಿ ರಸ್ತೆಗಳು ನಿರ್ಮಾಣವಾಗಿ, ಬಸ್ ಸೇರಿದಂತೆ ಇತರೆ ಭಾರಿ ವಾಹನಗಳು ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ಸಂಚರಿಸುವ ಪಾದಚಾರಿಗಳಿಗೆ ಕಷ್ಟವಾಗಿದೆ. ನಗರವಾಸಿಗಳು ಹಾಗೂ ನಗರಕ್ಕೆ ಆಗಮಿಸುವ ಜನರು ಸಹ ರಸ್ತೆ ವಿಭಜಕಗಳ ತೆರವಿಗೆ ಆಗ್ರಹಿಸುತ್ತಿದ್ದಾರೆ. ವೈಯಕ್ತಿಕವಾಗಿ ಸ್ವತಃ ರಸ್ತೆ ವಿಭಜಕಗಳ ಪರೀಶಲನೆ ನೆಡೆಸಿದ್ದೇನೆ. ತುರ್ತಾಗಿ ರಸ್ತೆ ವಿಭಜಕಗಳನ್ನು ತೆರವು ಆಗಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರವಾಗಿ ಸದನದಲ್ಲಿ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಅವೈಜ್ಞಾನಿಕ ರಸೆ ವಿಭಜಕ ನಿರ್ಮಿಸಿದ ಗುತ್ತಿದಾರ ಬಿಲ್‌ಗಳನ್ನು ಸರ್ಕಾರ ಈಗಾಗಲೇ ತಡೆಹಿಡಿದೆ. ವಿಭಜಕಗಳ ತೆರವಿನ ಕುರಿತು ಮುಖ್ಯಮಂತ್ರಿ ಹಾಗೂ ಸಂಬAಧಪಟ್ಟ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು.


Namma Challakere Local News
error: Content is protected !!