ಚಳ್ಳಕೆರೆ :
ಬಿಜಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುತ್ತಿಗಾರಹಳ್ಳಿ ಸಮೀಪದ ಓಬಯ್ಯನಹಟ್ಟಿ ಮತ್ತು ಕಾಮೇರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಟಿ.ದೇವರಾಜ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ.
ಶಿಕ್ಷಣದಿಂದ ಸಾಮಾಜಿಕ ಪ್ರಗತಿ ಸಾಧ್ಯ
ಮೊಳಕಾಲ್ಮುರು: ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಆಗ ಮಾತ್ರ ಸಾಮಾಜಿಕ ಪ್ರಗತಿಸಾಧ್ಯ ಎಂದು ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಟಿ.ದೇವರಾಜ್ ಹೇಳಿದರು.
ಬಿಜಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುತ್ತಿಗಾರಹಳ್ಳಿ ಸಮೀಪದ ಓಬಯ್ಯನಹಟ್ಟಿ ಮತ್ತು ಕಾಮೇರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ 50 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಸಬಲೀಕರಣದ ಉದ್ದೇಶವನ್ನುಟ್ಟುಕೊಂಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ, ಜಾಮೆಟ್ರಿ, ಪೆನ್, ಪೆನ್ಸಿಲ್ ಸೇರಿದಂತೆ ಹಲವು ಕಲಿಕಾ ಸಾಮಾಗ್ರಿಗಳನ್ನು ವಿತರಿಸಲು ನಮ್ಮ ಎತ್ತಿನಹಟ್ಟಿ ಗೌಡ್ರು ಬಳಗವು ನಿರ್ಧರಿಸಿದೆ. ಸರ್ಕಾರಿ ಶಾಲೆಗಳ ಸಬಲೀಕರಣದಿಂದ ಮಾತ್ರ ಸಮಾಜದ ಎಲ್ಲ ಸಮುದಾಯದ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸುತ್ತಿಲ್ಲ ಎಂದು ಆರೋಪಿಸಿ ನೂರಾರು ಪೋಷಕರು ತಮ್ಮ ಮಕ್ಕಳನ್ನು ದುಬಾರಿ ವೆಚ್ಚದ ಶುಲ್ಕಗಳನ್ನು ಪಾವತಿಸಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದರಿಂದ ಬಡತನದಲ್ಲಿರುವ ಪೋಷಕರಿಗೆ ಆರ್ಥಿಕ ಹೊರೆಯಾದರೆ ಮತ್ತೊಂದು ಕಡೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಂಠಿತಗೊಂಡು ಸರ್ಕಾರಿ ಶಾಲೆ ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ವಿಧದಲ್ಲೂ ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಸರ್ಕಾರಿ ಶಾಲೆಯ ಶಿಕ್ಷಕರು ಬದ್ಧತೆಯಿಂದ ಸರ್ಕಾರ ಶಾಲೆಯ ಮಕ್ಕಳಿಗೆ ಗುಣಮಟ್ಟದ ಮತ್ತು ವಸ್ತುನಿಷ್ಠ ವೈಜ್ಞಾನಿಕ, ವೈಚಾರಿಕ ಶಿಕ್ಷಣವನ್ನು ನೀಡುವ ಮನಸ್ಸು ಮಾಡಬೇಕಿದೆ. ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರ ನೀಡುವ ಮಾರ್ಗದರ್ಶನವನ್ನು ಪಡೆಯುವ ಮೂಲಕ ಉನ್ನತ ಶಿಕ್ಷಣದತ್ತ ಹೆಜ್ಜೆಹಾಕಬೇಕು.
ಶಿಕ್ಷಣದಿಂದಲೇ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗುತ್ತದೆ. ಸದೃಢ ಸಮಾಜವನ್ನು ನಿರ್ಮಿಸುವ ಮಹೊನ್ನತ ಕಾರ್ಯ ನೆರವೇರುತ್ತದೆ ಎಂದರು.
ಇದೇವೇಳೆ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಪಿ.ನಾಗರಾಜ್, ಮುತ್ತಿಗಾರಹಳ್ಳಿ ಬೋರಯ್ಯ, ಶಿಕ್ಷಕರಾದ ಅಶೋಕ್, ಹಸೀನ, ಗಿರಿಜಾಶಂಕರ್ ಅವರೂ ಉಪಸ್ಥಿತರಿದ್ದರು.

