ಯಾರಿಗೆ ಹೇಳನಾ ನಮ್ಮ ಪ್ರಾಬ್ಲಮ್….!!!
ಪಡಿತರ ಪಡೆಯಲು ಒಂದು ದಿನ ಕೆಲಸ ಬಿಟ್ಟು ಕಾಯಬೇಕಾದ ಸ್ಥಿತಿ | ಪ್ರತಿ ಪಡಿತರ ಚೀಟಿಗೆ 20 ರೂ ಕಮಿಷನ್| ಇದಕ್ಕೆಲ್ಲಾ ಶಾಶ್ವತ ಪರಿಹಾರ ಎಂದು ….?
ಚಳ್ಳಕೆರೆ. ಮಾ.23:
ಹೊತ್ತುಟ್ಟೋಕು ಮುಂಚೆ , ಕೆಲಸ ಕಾರ್ಯ ಊಟ ನೀರು ಎಲ್ಲಾ ಬಿಟ್ಟು ಕಾದು ಕುಳಿತರು ಪಡಿತರ ಪಡಿತರ ದೊರೆಯುವುದು ಅನುಮಾನವೇ. ಪಡಿತರ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ತಳ್ಳಾಟ ನೂಕಾಟ ಪ್ರತಿ ತಿಂಗಳು ಸರ್ವೇ ಸಾಮಾನ್ಯವಾಗಿದೆ.
ಈ ದೃಶ್ಯ ಕಂಡು ಬಂದಿದ್ದು ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿನ ಶಾಪ್ ನಂಬರ್ 2 ರಲ್ಲಿ. ನನ್ನಿವಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹುತೇಕ ಬಡವರು, ರೈತರು, ಬುಡುಕಟ್ಟು ಜನರೇ ವಾಸಿಸುತ್ತಿದ್ದು, ಕೃಷಿ, ಹೈನುಗಾರಿಕೆ ಕೂಲಿಯನ್ನೇ ಪ್ರಮುಖ ಕಸುಬಾಗಿ ಅಳವಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಪಡಿತರ ಪಡೆಯಬೇಕಾದರೆ ಫಲಾನುಭವಿಗಳು ಸುಮಾರು 5ರಿಂದ 6 ಕೀ ದೂರದಿಂದ ದಿನದ ಕೆಲಸ ಕಾರ್ಯ ಊಟ, ನಿದ್ದೆ, ಎಲ್ಲವನ್ನೂ ಬಿಟ್ಟು ಸಾರಿಗೆ ಸೌಲಭ್ಯವಿಲ್ಲದೇ ಬೆಳಗ್ಗೆ 5 ಗಂಟೆಗೆ ನಡೆದು ಬಂದು ರಾತ್ರಿ 10ಗಂಟೆ ವರೆಗೂ ಕಾದು ಕುಳಿತರೂ ಕೆಲವೊಮ್ಮೆ ಪಡಿತರ ಸಿಗುವುದು ಅನುಮಾನ….
ಅಷ್ಟೇ ಅಲ್ಲದೇ ಬಿರು ಬಿಸಿಲು ಲೆಕ್ಕಿಸದೇ ಬಿಸಿಲಲ್ಲಿ ನಿಂತು ಕಾದು ಪಡಿತರ ತೆಗೆದುಕೊಂಡಾಗ ಪ್ರತಿ ಪಡಿತರ ಚೀಟಿಗೆ 20 ರೂ ಕಮಿಷನ್ ನೀಡಬೇಕು. ಇಲ್ಲವಾದಲ್ಲಿ ಹಣ ಕೊಡುವವರೆಗೂ ಪಡಿತರ ವಿತರಿಸುವುದಿಲ್ಲ. ಸರ್ಕಾರ ಉಚಿತವಾಗಿ ಪಡಿತರ ವಿತರಣೆ ಮಾಡಬೇಕು ಎಂದು ಸೂಕ್ತ ನಿರ್ದೇಶನ ನೀಡಿದೆ. ಆದರೂ ಇಲ್ಲಿನ ಅಕ್ರಮವನ್ನು ಪ್ರಶ್ನಿಸುವವರು ಯಾರೂ ಇಲ್ಲಾ….
ಪಡಿತರ ಪಡೆಯಲು ಈ ರೀತಿಯ ನೂಕು ನುಗ್ಗಲು ಆಗುತ್ತಿರುವುದಕ್ಕೆ ಕಾರಣವೇನೆಂದು ಕೇಳಿದಾಗ ಫಲಾನುಭವಿಯೊಬ್ಬರು ಪ್ರತಿಕ್ರಿಯಿಸಿ, ಈ ನ್ಯಾಯಬೆಲೆ ಅಂಗಡಿಯಲ್ಲಿ ಒಂದು ದಿನ ಅಥವಾ ಸ್ವಲ್ಪ ತಡವಾಗಿ ಬಂದರೂ ಪಡಿತರ ಖಾಲಿಯಾಗಿದೆ. ಮುಂದಿನ ತಿಂಗಳು ಕೊಡುತ್ತೇನೆ ಬನ್ನಿ ಎಂಬ ಉದ್ಧಟತನದ ಉತ್ತರ ನೀಡುತ್ತಾರೆ. ಆದರೆ ನಮಗೆ ಹಂಚಿಕೆಯಾದ ಪಡಿತರ ಎಲ್ಲಿ ಹೋಗುತ್ತದೆ ಎಂಬುದೇ ತಿಳಿಯುತ್ತಿಲ್ಲ…. ಎಂದು ಪ್ರಶ್ನಿಸಿದ್ದಾರೆ.
ಇದೇ ರೀತಿ ಸಮಸ್ಯೆ ಎದುರಾದಾಗ ಪಕ್ಕದ ರಾಮಾಜೋಗಿ ಹಳ್ಳಿಯವರು ಪಡಿತರ ವಿತರಿಸಿದರು. ಆಗ ಇದಾವುದೇ ಸಮಸ್ಯೆ ಇರಲಿಲ್ಲ ಆದರೆ ಮತ್ತೆ ಅದೇ ವ್ಯಕ್ತಿ ವಿತರಣೆಗೆ ಮುಂದಾದಗಿನಿಂದ ಮತ್ತೆ ಅದೇ ಕತೆಯಾಗಿದೆ.
ಇಲ್ಲಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬೇಕಾದರೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನೊಂದು ನ್ಯಾಯಬೆಲೆ ಅಂಗಡಿ ಸ್ಥಾಪಿಸುವ ಮೂಲಕ ಸಮಸ್ಯೆಗೆ ಶಾಶ್ವತವಾದ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

