ಚಳ್ಳಕೆರೆ:
ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಚಳ್ಳಕೆರೆ
ವಕೀಲರ ಸಂಘ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ,
ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆಯ
ಸಂಯುಕ್ತಾಶ್ರಯದಲ್ಲಿ ನಗರದ ಸೋಮುಗುದ್ದು
ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ
ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಯಿತು.
ನ್ಯಾಯಾಧೀಶರಾದ ಪುನಿತ್ ಬಿ.ಆರ್ ಅವರು ಗಿಡಕ್ಕೆ
ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಜೀತ
ಪದ್ಧತಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ
ಅಮಾನವೀಯ ಪದ್ಧತಿಯಾಗಿದ್ದು, ಇದನ್ನು
ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಎಲ್ಲರ
ಕರ್ತವ್ಯವಾಗಿದೆ ಎಂದರು. ಕಾರ್ಮಿಕರ ಹಕ್ಕುಗಳನ್ನು
ರಕ್ಷಿಸಲು ಸರ್ಕಾರ ಹಲವು ಕಾನೂನು ಹಾಗೂ
ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಬಗ್ಗೆ ಜನರಿಗೆ
ಅರಿವು ಮೂಡಿಸುವುದು ಅಗತ್ಯವಿದೆ ಎಂದು ಹೇಳಿದರು.
ಕಾನೂನು ಅರಿವು ಕಾರ್ಯಕ್ರಮಗಳು ಶೋಷಿತ ವರ್ಗದ
ಜನರಿಗೆ ನ್ಯಾಯ ಪಡೆಯಲು ದಾರಿ ತೋರಿಸುತ್ತವೆ
ಎಂದರು.
ವಕೀಲರ ಸಂಘದ ಉಪಾಧ್ಯಕ್ಷೆ ಬಿ.ಟಿ. ಶ್ಯಾಮಲ
ಮಾತನಾಡಿ, ಜೀತ ಪದ್ಧತಿ ಕಾನೂನುಬಾಹಿರವಾಗಿದ್ದು,
ಇಂತಹ ಪದ್ಧತಿಗೆ ಒಳಗಾಗಿರುವವರು ಯಾವುದೇ
ಭಯವಿಲ್ಲದೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು
ತಿಳಿಸಿದರು. ಉಪನ್ಯಾಸಕ ಕುಮಾರಸ್ವಾಮಿ ಮಾತನಾಡಿ,
ಜೀತ ಕಾರ್ಮಿಕ ವ್ಯವಸ್ಥೆಯ ದುಷ್ಪರಿಣಾಮಗಳು ಹಾಗೂ
ಅದರಿಂದ ಹೊರಬರಲು ಇರುವ ಕಾನೂನು ಪರಿಹಾರಗಳ
ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ರೇಹಾನ್ ಪಾಷ, ವಕೀಲರ
ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಆರ್. ಆಶ್ವತ್ ನಾಯಕ,
ಬಿಇಒ ಕೆ.ಎಸ್. ಸುರೇಶ್, ಪಿಎಸ್ಐ ಈರೇಶ, ಕಾರ್ಮಿಕ
ನಿರೀಕ್ಷಕಿ ಟಿ. ಕುಸುಮ, ವಕೀಲರ ಸಂಘದ ಖಜಾಂಚಿ
ಕುಮಾರಿ ಬಸವರಾಜೇಶ್ವರಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶಾಂತಕುಮಾರಿ, ಶ್ರೀನಿವಾಸ್
ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದರು.

