ಕುದಾಪುರ ಇಂಜಿನಿಯರಿಂಗ್ ವಿದ್ಯಾರ್ಥಿ ಪಿ.ವಿವೇಕಾನಂದ ಸಾವು : ಇಡೀ ಊರಿಗೆ ಊರು ಕಂಬನಿ
ನಾಯಕನಹಟ್ಟಿ-:ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದಾಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಂ. ಪಾಲಯ್ಯ ಶಾರದಮ್ಮ ದಂಪತಿಯ ಪುತ್ರ ಪಿ. ವಿವೇಕಾನಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ಅನಾರೋಗ್ಯ ಕಾಯಿಲೆ ರೋಗದಿಂದ ಬಳಲುತ್ತಿದ್ದ ಪಿ.
ವಿವೇಕಾನಂದ ಅನಾರೋಗ್ಯದಿಂದ ಸಾವನ್ನಪ್ಪಿದ್ದು ಯುವಕನ ಸಾವಿಗೆ ಕುದಾಪುರ ಗ್ರಾಮದಲ್ಲಿ ನೀರವ ಮೌನದ ಕಾರ್ಮೋಡ ಕವಿದಿದೆ.ಗ್ರಾಮಕ್ಕೆ ಕೀರ್ತಿ ತರುವ ನಿರೀಕ್ಷೆ ಇಟ್ಟಿದ್ದ ಪಿ. ವಿವೇಕಾನಂದ ಅಗಲಿಕೆಗೆ ಗ್ರಾಮಸ್ಥರು ಕ್ಯಾಂಡಲ್ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಕೆ.ಜಿ ಪ್ರಕಾಶ್ ಮಾತನಾಡಿ, ಜೀವನದಲ್ಲಿ ಸಾಧಿಸುವ ಚಲದಿಂದ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಜಿನಿಯರಿಂಗ್
ಮಾಡುತ್ತಿದ್ದ ಕುದಾಪುರ ಗ್ರಾಮದ ನಮ್ಮೆಲ್ಲ ನೆಚ್ಚಿನ ಪಿ ವಿವೇಕಾನಂದ ಕಳೆದ ಹಲವು ವರ್ಷಗಳಿಂದ ಹೃದಯ ಸಂಬಂಧ ಕಾಯಿಲೆಗಳಿಂದ ಬಳಲಿ ನಮ್ಮನ್ನು ಬಿಟ್ಟು ಅಗಲಿದ್ದಾನೆ, ಗ್ರಾಮದ ಯುವಕನ ಅಗಲಿಕೆಯು ನಮ್ಮ ಮನೆ ಮಗನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ.
ವಿದ್ಯಾಭ್ಯಾಸ ಮಾಡಿ ಊರಿಗೆ ಕೀರ್ತಿ ತಂದು ಕೊಟ್ಟು ಇಂದಿನ ಪೀಳಿಗೆಗೆ ಮಾದರಿಯಾಗಿರಬೇಕಾದ ಯುವಕ ವಯಸ್ಸಲ್ಲದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವುದು ತುಂಬಾ ದುಃಖಕರ ಸಂಗತಿಯಾಗಿದೆ, ದೇವರು ಅವರ ಕುಟುಂಬಕ್ಕೆ ನೋವು ತುಂಬುವ ಶಕ್ತಿ ನೀಡಲಿ, ಗ್ರಾಮದ ಅಚ್ಚುಮೆಚ್ಚಿನ ಯುವಕನನ್ನು ಕಳೆದುಕೊಂಡಿದ್ದು ತುಂಬಾ ದುಃಖ ತಂದಿದೆ ಎಂದರು.
ಪಶು ಸಂಗೋಪನೆ ಇಲಾಖೆ ಅಧೀಕ್ಷಕರು ಎಂ.ಬಿ. ಸತೀಶ್ ಮಾತನಾಡಿ , ಕುದಾಪುರ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದ ಗ್ರಾಮದ ನೆಚ್ಚಿನ ಯುವಕ ವಿವೇಕಾನಂದ ಹೆಸರಿಗೆ ತಕ್ಕಂತೆ ಸುಸಂಸ್ಕೃತದಿಂದ ಬೆಳೆದಂತಹ ಹುಡುಗ, ಆದರೆ ಅನಾರೋಗ್ಯದ ಕಾರಣ ನಮ್ಮೆಲ್ಲರನ್ನು ಬಿಟ್ಟು ಹೋಗಿರುವುದು ಇಡೀ ಗ್ರಾಮಕ್ಕೆ ಶೋಕ ತಂದಿದೆ, ವಿದ್ಯಾಭ್ಯಾಸದಲ್ಲಿ ಯಶಸ್ಸಿನ ಪಯಣ ಸಾಗಿಸುತ್ತಾ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಹಂಬಲ ಹೊಂದಿದ್ದ ಯುವಕನನ್ನು ಕಳೆದುಕೊಂಡಿರುವುದರಿಂದ ಗ್ರಾಮದ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ. ಇಂತಹ ಯುವಕನನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ನಮ್ಮ ಗ್ರಾಮದ ದೌರ್ಭಾಗ್ಯ, ಯುವಕನ ಆತ್ಮಕ್ಕೆ ಶಾಂತಿ ಸಿಗಲಿ,ವಿವೇಕಾನಂದನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದರು.
ಈ ವೇಳೆ ಸಮಸ್ತ ಕುದಾಪುರ ಗ್ರಾಮಸ್ಥರು ಇದ್ದರು.

