ಪಿ.ಗೌರಿಪುರ-ಪ್ರಸನ್ನ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ.
ಪರಶುರಾಂಪುರ: ಸಮೀಪದ ಪಿ.ಗೌರಿಪುರ ಗ್ರಾಮದಲ್ಲಿ ಕಡೇ ಕಾತಿ೯ಕೋತ್ಸವದ ಅಂಗವಾಗಿ ಶನಿವಾರ ಸಂಜೆ ಪ್ರಸನ್ನ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ವೈಭವದಿಂದ ಜರುಗಿತು.
ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ‘ಜೈ ಶ್ರೀರಾಮ್ … ವೆಂಕಟರಮಣ ಗೋವಿಂದ… ಎಂಬ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ರಥೋತ್ಸವ ಪ್ರಾರಂಭವಾಯಿತು. ರಥ ಸಾಗುತ್ತಿದ್ದಂತೆ ಭಕ್ತರು ಹೂವು, ಬಾಳೆಹಣ್ಣು, ಎಸೆದು ಭಕ್ತಿ ಸಮರ್ಪಿಸಿದರು.
ಈ ವೇಳೆಯಲ್ಲಿ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಚಳ್ಳಕೆರೆಯ ಮಂಜುಳ ಹೊಸಮನೆ ಸ್ವಾಮಿ ಅವರು 1,65111 (ಒಂದು ಲಕ್ಷದ ಅರವತ್ತೈದು ಸಾವಿರ ನೂರು ಹನ್ನೋಂದು) ರೂಪಾಯಿಗಳಿಗೆ ಪಡೆದು ಕೊಂಡರು.ಸಂದಭ೯ದಲ್ಲಿ ದೇವರ ಪ್ರಸಾದ ನೀಡಿ ಗೌರವಿಸಿದರು.
ನೆರೆ ಆಂಧ್ರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ರಥೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಧ್ವಾರಾಧನೆ,ಕುಂಬಾರಾಧನೆ,ರಥಾಧೀ ದೇವತಾ ಹೋಮ,ತೇರಿಗೆ ತೈಲಾಭಿಷೇಕ,ಎಲೆ ಪೂಜೆ ಸೇರಿದಂತೆ ಇನ್ನಿತರ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ನಂತರ ಭಕ್ತರಿಗೆ ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗ ಜರುಗಿತು.ದೇವಸ್ಥಾನ ಸಮಿತಿಯವರು,ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು,ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

