“ಗೋಪಿಯರ ಶ್ರೀಕೃಷ್ಣ ಪ್ರೇಮ ಅಲೌಕಿಕವಾದದ್ದು”:- ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ:-ಗೊಲ್ಲ ಗೋಪಿಯರ ಶ್ರೀಕೃಷ್ಣನ ಪ್ರೇಮ ಅಲೌಕಿಕವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ “ಶ್ರೀಕೃಷ್ಣ ಜನ್ಮಾಷ್ಟಮಿ”ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಭಗವಾನ್ ಶ್ರೀಕೃಷ್ಣನ ಬಗ್ಗೆ ಉಪನ್ಯಾಸ ನೀಡಿದರು. ಶ್ರೀರಾಮ ಮರ್ಯಾದಾ ಪುರುಷೋತ್ತಮ ಎನಿಸಿದರೆ ಶ್ರೀಕೃಷ್ಣ ಲೀಲಾಮಾನುಷ ಪುರುಷೋತ್ತಮ ಎಂಬ ಶಾಶ್ವತ ಕೀರ್ತಿ ಗಳಿಸಿದ. ಶ್ರೀಮದ್ ಭಗವದ್ಗೀತೆಯ ಮೂಲಕ ಕರ್ಮ ಮಾಡು ಆದರೆ ಫಲ ಬಯಸಬೇಡ ಎಂಬ ಮಹಾನ್ ತತ್ವವನ್ನು ಸಾರಿದವನು ಶ್ರೀಕೃಷ್ಣ ಎಂದು ಅವನ ಮಹಿಮಾವಲೋಕನ ಮಾಡಿದರು. “ಶ್ರೀಕೃಷ್ಣ ಜನ್ಮಾಷ್ಟಮಿ”ಯ ಪ್ರಯುಕ್ತ ಸದ್ಭಕ್ತರಿಂದ “ಶ್ರೀರಾಮರಕ್ಷಾ” ಸ್ತೋತ್ರ ಪಠಣ, ಶ್ರೀಕೃಷ್ಣನ ನಾಮಜಪ, ವಿಶೇಷ ಶ್ರೀಕೃಷ್ಣನ ಭಜನೆಗಳು ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ,ಎಂ ಗೀತಾ ನಾಗರಾಜ್, ಅನುಸೂಯ ರಾಘವೇಂದ್ರ, ಗೀತಾ ವೆಂಕಟೇಶರೆಡ್ಡಿ, ಅನ್ವಿಕಾ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ ಉಪಸ್ಥಿತರಿದ್ದರು.

