ಚಳ್ಳಕೆರೆ: ಹಸಿ ಕಸ ಸಂಸ್ಕರಣ ಘಟಕ ತುರ್ತಾಗಿ ಆರಂಭಿಸಿ ಗೊಬ್ಬರ
ಉತ್ಪಾದನೆಗೆ ಕ್ರಮ ಕೈಗೊಳ್ಳಿ ಎಂದು ನಗರಸಭೆ ಅಧ್ಯಕ್ಷೆ ಮಂಜುಳ
ಪ್ರಸನ್ನ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವಾರದ ಸಂತೆ ಮೈದಾನದಲ್ಲಿ ಸ್ಥಾಪಿಸಿರುವ ಹಸಿ ಕಸ ಸಂಸ್ಕರಣ
ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಘಟಕ ಸ್ಥಾಪನೆ ಮಾಡಿ
ಇಲ್ಲಿಯವರೆಗೂ ಗೊಬ್ಬರ ಉತ್ಪಾದನೆ ಮಾಡದೇ ಇರುವುದುದಕ್ಕೆ ಬೇಸರ
ವ್ಯಕ್ತಪಡಿಸಿದರು.
ನಂತರ ಮಾತನಾಡಿ ಒಂದು ಘಟಕದಲ್ಲಿ ಈಗಾಗಲೇ
ಕಸದಿಂದ ಗೊಬ್ಬರ ಉತ್ಪಾದನೆಯಾಗುತ್ತಿದೆ. ಸರ್ಕಾರ ಸರಬರಾಜು
ಮಾಡಿರುವ ಯಂತ್ರೋಪಕರಣಗಳ ಜೋಡಣೆ ಕಾರ್ಯ ತ್ವರಿತಗತಿಯಲ್ಲಿ
ನಡೆಯಲು ಕ್ರಮ ವಹಿಸಬೇಕು. ವಿವಿಧ ವಾರ್ಡ್ ಗಳಲ್ಲಿ ಪ್ರತಿದಿನ
ಯಥೇಚ್ಚವಾಗಿ ಕಸ ದೊರೆಯುತ್ತದೆ. ಆ ಕಸವನ್ನು ಹಸಿ ಮತ್ತು ಒಣಕಸವಾಗಿ
ವಿಂಗಡಿಸಿ ಗುಣಮಟ್ಟ ಗೊಬ್ಬರ ಉತ್ಪಾದನೆ ಮಾಡಿ ರೈತರಿಗೆ ಮಾರಾಟ
ಮಾಡಿದರೆ ನಗರಸಭೆಗೆ ಹೆಚ್ಚು ಆದಾಯ ಬರುತ್ತದೆ.
ನಗರದಲ್ಲಿ ಸ್ಥಾಪಿಸಿರುವ
ಕಸ ಸಂಸ್ಕರಣ ಎರಡೂ ಘಟಕದಲ್ಲಿ ಹೆಚ್ಚು ಗೊಬ್ಬರ ಉತ್ಪಾದನೆಯ ಕಡೆಗೆ
ಗಮನಹರಿಸಬೇಕು’ ಎಂದು ಹೇಳಿದರು.
ನಗರಸಭೆಯ ಆರೋಗ್ಯ ನಿರೀಕ್ಷಕಿ ನಿರೀಕ್ಷಕಿ ಗೀತಾ ಮಾತನಾಡಿ
ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ
ಕಸದ ವಾಹನಗಳು ಬಂದಾಗ ನೀಡುವುದರಿಂದ ಪರಿಸರ ಮಾಲಿನ್ಯವನ್ನು
ತಡೆಗಟ್ಟಲು ಸಹಕಾರಿಯಾಗಲಿದೆ.
ಇದರ ಬಗ್ಗೆ ಸಾರ್ವಜನಿಕರಿಗೆ ಹಲವು
ಬಾರಿ ತಿಳುವಳಿಕೆ ನೀಡಿದ್ದು ನಗರ ಸಭೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು
ಕೈ ಜೋಡಿಸಿದಾಗ ನಗರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡಲು ಸಾಧ್ಯ
ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸುಮಾ ಭರಮಯ್ಯ,
ಪರಿಸರ ಇಂಜಿನಿಯರ್ ನರೇಂದ್ರಬಾಬು , ಸೇರಿದಂತೆ ಪೌರಕಾರ್ಮಿಕರು
ಉಪಸ್ಥಿತರಿದ್ದರು.

