ಚಿತ್ರದುರ್ಗ ಜೂ.04: ನಮ್ಮದು ಬಸವ ಪಥದ ಸರ್ಕಾರ, ಬಸವಣ್ಣನವರ ವಚನ ಸಾಹಿತ್ಯ ಉತ್ಕೃಷ್ಟವಾದದು. ನಾಡಿನ ಮಠಾಧೀಶರು, ಸ್ವಾಮೀಜಿಗಳ ಅಭಿಪ್ರಾಯ ಪಡೆದು ಬಸವಣ್ಣನ ನಿಜ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಿಮಿತ್ತ, ಶನಿವಾರ ಜಿಲ್ಲೆಗೆ ಆಗಮಿಸಿದ ಅವರು ಹಿರಿಯೂರು ತಾಲೂಕಿನ ದೇವರಕೊಟ್ಟ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ
ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕಾರ್ಯ ಪೂರ್ಣಗೊಂಡಿರುವುದರಿಂದ ಸಮಿತಿ ವಿಸರ್ಜನೆ ಮಾಡಲಾಗಿದೆ.

ಯಾವುದೇ ಒತ್ತಡದಿಂದ ಈ ನಿರ್ಧಾರ ಕೈಗೊಂಡಿಲ್ಲ. ಹೊಸ ಸಮಿತಿ ರಚಿಸುವ ಪ್ರಮೇಯ ಇಲ್ಲ ಎಂದು ಸ್ಪಷ್ಟ ಪಡಿಸಿದರು. ನಾಡಿನ ಬೇರೆ ಬೇರೆ ಮಠಾಧೀಶರು ಪತ್ರ ಬರೆದಿದ್ದಾರೆ. 2015 ರಲ್ಲಿ ರಚಿಸಿದ ಪ್ರೋ.ಬರಗೂರು ರಾಮಚಂದ್ರಪ್ಪ ಪರಿಷ್ಕರಣ ಸಮಿತಿ ಹಾಗೂ ಈಗಿನ ಸಮಿತಿ ರಚಿಸಿರುವ ಬಸವಣ್ಣ ಪಠ್ಯದಲ್ಲಿ ಒಂದು ವಾಕ್ಯದ ವ್ಯತ್ಯಾಸವಿದೆ. ಸಾಣೇಹಳ್ಳಿ ಶ್ರೀಗಳು ಹೇಳಿದ ಲಿಂಗದೀಕ್ಷೇ ವಿಚಾರ ಎರೆಡು ಪಠ್ಯದಲ್ಲೂ ಹೇಳಲಾಗಿದೆ.

ಬಸವಣ್ಣ ಪಠ್ಯದಲ್ಲಿ ಸಮಗ್ರ ಬದಲಾವಣೆ ತರಲಾಗುವುದು. ಹೆಗಡೆವಾರ್ ಪಠ್ಯ ಇರುವುದರಲ್ಲಿ ಯಾವುದೇ ತಪ್ಪಿಲ್ಲ.ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪರಿಷ್ಕೃತ ಪಠ್ಯದ ಸಂಪುಟ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ, ಜಲಸಂಪನ್ನೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕಿ ಪೂರ್ಣಿಮಾ ಶ್ರೀನಿವಾಸ, ಜಿ.ಹೆಚ್.ತಿಪ್ಪಾರೆಡ್ಡಿ, ರಾಜೇಶ್ ಗೌಡ, ಚಿದಾನಂದ ಗೌಡ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಸೇರಿದಂತೆ ಇತರೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೈತರು ಹಾಗೂ ಸ್ಥಳಿಯರ ಮನವಿಗಳನ್ನು ಸ್ವೀಕರಿಸಿದರು.

Namma Challakere Local News
error: Content is protected !!