ನಾಯಕನಹಟ್ಟಿ:: ಹೋಬಳಿ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮೈನಹಟ್ಟಿಯಲ್ಲಿ ಆಧುನಿಕತೆಯ ವ್ಯಾಮೋಹಕ್ಕೆ ಬಟ್ಟೆ, ಬರೆ ಏನು ಹಲವರ ಜೀವನ ಶೈಲಿಯೇ ಬದಲಾಗಿದೆ. ಆದರೆ ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಸಡಗರ ಮಾತ್ರ ಮೂಲ ಸಂಪ್ರದಾಯವನ್ನೇ ನೆನಪಿಸುತ್ತಿದೆ. ಕಿರಿಯರಿಗೆ ಲಂಬಾಣಿ ಪರಂಪರೆಯನ್ನು ಪರಿಚಯಿಸುವ ಮೂಲಕ ಹಲವು ವರ್ಷಗಳಿಂದ ಬಂದ ಆಚರಣೆ ಬಿಡಬಾರದು ಎನ್ನುವ ಜ್ಞಾನದ ದೀಪ ಹಚ್ಚುತ್ತಿದ್ದಾರೆ.

ಲಂಬಾಣಿ ಸಮುದಾಯಕ್ಕೆ ಹೋಳಿ, ದೀಪಾವಳಿ ದೊಡ್ಡ ಹಬ್ಬಗಳು. ಹೊಟ್ಟೆಪಾಡಿಗಾಗಿ ನಗರ ಪ್ರದೇಶದತ್ತ ಗುಳೆ ಹೋದರೂ ಎರಡು ಹಬ್ಬದ ವೇಳೆ ಮರಳಿ ಗ್ರಾಮಕ್ಕೆ ಆಗಮಿಸಿ ಸಡಗರದಿಂದಲೇ ಹಬ್ಬ ಆಚರಿಸುತ್ತಾರೆ. ಎಲ್ಲ ಸಮುದಾಯಕ್ಕೂ ಒಂದು ಬಗೆಯಾದರೆ ಲಂಬಾಣಿ ಜನಾಂಗಕ್ಕೆ ಮಾತ್ರ ದೀಪಾವಳಿ ಮತ್ತೊಂದು ಬಗೆಯ ವಿಶೇಷ ಎನಿಸಿದೆ.

ಹೀಗಿದೆ ಆಚರಣೆ: ದೀಪಾವಳಿಗೆ ಮೊದಲು ಒಂದು ತಿಂಗಳು ತಾಂಡಾದಲ್ಲಿನ ಹಿರಿಯ ಮಹಿಳೆಯರು ಕಿರಿಯರಿಗೆ ತಮ್ಮ ಪಾರಂಪರಿಕ ಕಸೂತಿ ಕಲೆ, ಹಾಡುಗಾರಿಕೆ, ನೃತ್ಯ ಕಲಿಸಲು ಆರಂಭಿಸುತ್ತಾರೆ. ನಿತ್ಯ ತಾಂಡಾಗಳ ಸೇವಾಲಾಲ್‌ ದೇವಾಲಯ ಬಳಿ ಮಹಿಳೆಯರು ಸೇರಿ ಹಾಡು, ನೃತ್ಯ ಅಭ್ಯಾಸ ಮಾಡುವುದು ವಾಡಿಕೆ. ದೀಪಾವಳಿ ದಿನದಂದು ತಾವೇ ಕಲಿತು ಸಿದ್ಧಪಡಿಸಿದ ತಮ್ಮ ಪಾರಂಪರಿಕ ವಸ್ತ್ರಗಳನ್ನು ತೊಡುತ್ತಾರೆ. ಅಮಾವಾಸ್ಯೆ ಸಂಜೆ ದೀಪವನ್ನು ಬಾಲಕಿಯರೇ ಮಾಡುತ್ತಾರೆ. ತಾಂಡಾದ ನಾಯಕನ ಮನೆಯಿಂದ ಹಣತೆ ಪಡೆದು, ಎಲ್ಲರ ಮನೆಗಳ ಎದುರು ಜೋಡಿಸಿಟ್ಟ ದೀಪಗಳನ್ನು ಬೆಳಗಿಸುವುದು ಪದ್ಧತಿ. ಹಣತೆ ಹಿಡಿದು ಮನೆಮನೆಗೆ ಹಾಡು ಹೇಳುತ್ತ ಬಾಲಕಿಯರು ತೆರಳುತ್ತಿರುವಾಗ ಹಿರಿಯರು ಅವರನ್ನು ಸ್ವಾಗತಿಸುತ್ತಾರೆ. ತಡರಾತ್ರಿವರೆಗೂ ತಾಂಡಾದ ಮುಖ್ಯ ಸ್ಥಳ ಸೇವಾಲಾಲ್‌ ದೇವಾಲಯದ ಎದುರು ಬಾಲಕಿಯರು ಮತ್ತು ಮಹಿಳೆಯರು ಜತೆಗೂಡಿ ನೃತ್ಯಿಸುತ್ತಾರೆ.

ಪಾಡ್ಯವೂ ಸಂಭ್ರಮ: ದೀಪಾವಳಿ ಅಮಾವಸ್ಯೆ ದಿನ ಮಾತ್ರವಲ್ಲ ಪಾಡ್ಯದ ದಿನವೂ ಇವರಿಗೆ ಸಡಗರ. ಬೆಳಗ್ಗೆ ಎಲ್ಲರ ಮನೆ ಎದುರು ಸಗಣೆಯಿಂದ ಬೂದಗಳನ್ನು ತಯಾರಿಸಿ ಇಡುತ್ತಾರೆ. ಅವುಗಳನ್ನು ಅಲಂಕರಿಸಲು ಬೇಕಾದ ಹೊನ್ನಂಬರಿ, ಅಣ್ಣೆ ಹೂವುಗಳು ಹಾಗೂ ಉತ್ರಾಣಿ ಕಡ್ಡಿಗಳನ್ನು ಸಂಗ್ರಹಿಸುತ್ತಾರೆ. ಬೇರೆ ಬೇರೆ ದಿಕ್ಕುಗಳಲ್ಲಿ ತೆರಳಿದ ಬಾಲಕಿಯರು ಒಂದೆಡೆ ಸೇರಿ ಮನೆಯಿಂದ ತಂದ ಸಿಹಿ ತಿನಿಸುಗಳನ್ನು ಪರಸ್ಪರರು ವಿನಿಮಯಿಸಿಕೊಂಡು ತಿನ್ನುತ್ತಾರೆ. ಮದುವೆ ಫಿಕ್ಸ್‌ ಆಗಿರುವ ಬಾಲಕಿಯರನ್ನು ತಬ್ಬಿಕೊಂಡು ಗೆಳತಿಯರು ಮನಸೋಇಚ್ಛೆ ಅಳುವುದು ರೂಢಿ. ಲಂಬಾಣಿ ಸಮುದಾಯದಲ್ಲಿ ಒಮ್ಮೆ ತವರಿನಿಂದ ಗಂಡನಮನೆಗೆ ತೆರಳುವ ಮಹಿಳೆ ತಿರುಗಿ ಬರುವುದು ಅಪರೂಪ. ಹೀಗಾಗಿ ತಾನು ಬೆಳೆದ ವಾತಾವರಣ, ಅಲ್ಲಿನ ಬಾಲ್ಯದ ಗೆಳತಿಯರು, ಹಿರಿಯರನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ದುಃಖ ತಮ್ಮ ಸಮಾನಮನಸ್ಕರೊಂದಿಗೆ ಹಂಚಿಕೊಳ್ಳುತ್ತಾರೆ. ನಂತರ ಹೂವುಗಳೊಂದಿಗೆ ತಾಂಡಾಕ್ಕೆ ತೆರಳಿ ಎಲ್ಲ ಮನೆಗಳ ಎದುರು ಜೋಡಿಸಿಟ್ಟ ಬೂದಗಳಿಗೆ ಅಲಂಕರಿಸುತ್ತಾರೆ. ಇಡೀ ದಿನ ಹಾಡು, ನೃತ್ಯದೊಂದಿಗೆ ಬಾಲಕಿಯರು ಹಬ್ಬ ಆಚರಿಸುವುದು ತಾಲೂಕಿನ ತಾಂಡಾಗಳಲ್ಲಿ ಕಂಡು ಬಂತು.

ಕಾಲಕ್ಕೆ ತಕ್ಕಂತೆ ವೇಷ ಭೂಷಣಗಳು ಬದಲಾಗುತ್ತಿವೆ. ಆದರೆ ಮೂಲ ಸಂಪ್ರದಾಯದ ವಸ್ತ್ರಗಳನ್ನು ತೊಡುವುದರಿಂದ ಪರಂಪರೆ ಮುಂದುವರಿಸಿಕೊಂಡು ಹೋಗುವ ಆನಂದ ಸಿಗುತ್ತದೆ. ಎಲ್ಲರೂ ಒಂದಾಗಿ ಹಬ್ಬ ಆಚರಿಸುವುದರಿಂದ ಒಗ್ಗಟ್ಟು ಪ್ರದರ್ಶನವಾಗುತ್ತದೆ. ಈ ಕಲೆ, ಸಂಪ್ರದಾಯಗಳು ಮನಸ್ಸಿಗೆ ಆನಂದ ನೀಡುವುದರೊಂದಿಗೆ ಸಂಬಂಧಗಳನ್ನು ಬೆಸೆಯುತ್ತವೆ…..

ಇದೇ ಸಂದರ್ಭದಲ್ಲಿ ಊರಿನ ಮುಖಂಡರಾದ ನಾಯಕ್ ಶಿವಮೂರ್ತಿ ನಾಯ್ಕ, ದಾವು ಸಾಮ್ಯನಾಯ್ಕ, ಕಾರ್ಬಾರಿ ನಿರಂಜನ್, ಹಾಗೂ ಕಾಂತಪ್ಪನಾಯ್ಕ, ಮಹಾಂತೇಶ್, ಹಾಗೂ ಮನಮೈನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು

Namma Challakere Local News

You missed

error: Content is protected !!